ಹಾಸ್ಯಗಾರರ ಸಂಶೋಧನಾ ಕೃತಿಗೆ ಮತ್ತೊಂದು ಪ್ರತಿಷ್ಠಿತ ಗರಿ
ಆಪ್ತ ನ್ಯೂಸ್ ಶಿರಸಿ:
ಕರ್ನಾಟಕ ಯಕ್ಷಗಾನ ಅಕಾಡೆಮಿ ಘೋಷಿಸಿರುವ 2024ರ ಪುಸ್ತಕ ಗೌರವವನ್ನು ಈ ಬಾರಿ ಹಿರಿಯ ಪತ್ರಕರ್ತ ಮತ್ತು ಸಂಶೋಧಕರಾದ ಅಶೋಕ ಹಾಸ್ಯಗಾರ ಅವರ ಮಹತ್ವದ ಕೃತಿ ‘ದಶರೂಪಕಗಳ ದಶಾವತಾರ’ ಪಡೆದುಕೊಂಡಿದೆ.
ಉಡುಪಿಯ ಕಾಂತಾವರ ಕನ್ನಡ ಸಂಘವು ನೀಡಿದ ಪ್ರತಿಷ್ಠಿತ ದತ್ತಿ ನಿಧಿ ಪ್ರಶಸ್ತಿಯ ನಂತರ, ಇದೇ ಸಂಶೋಧನಾ ಕೃತಿಗೆ ಮತ್ತೆ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿರುವುದು ಹಾಸ್ಯಗಾರರ ಕೃತಿಗೆ ಹೊಸ ಮೆರುಗು ನೀಡಿದೆ.
ಅಶೋಕ ಹಾಸ್ಯಗಾರ—ನಿವೃತ್ತ ಪತ್ರಿಕಾ ಸಂಪಾದಕ, ಕವಿ, ಬರಹಗಾರ ಹಾಗೂ ಅಂಕಣಕಾರ—ಯಕ್ಷಗಾನ ಕ್ಷೇತ್ರದ ಕುರಿತು ಹತ್ತು ವರ್ಷಗಳಿಗಿಂತ ಅಧಿಕ ಕಾಲ ಆಳವಾದ ಅಧ್ಯಯನ ನಡೆಸಿ ಈ ಅಪರೂಪದ ಸಂಶೋಧನಾ ಗ್ರಂಥವನ್ನು ರಚಿಸಿದ್ದಾರೆ. ಪ್ರಕಟವಾದ ತಕ್ಷಣವೇ ಮಂಗಳೂರು ವಿಶ್ವವಿದ್ಯಾಲಯದ ‘ಯಕ್ಷಮಂಗಳ’ ಪ್ರಶಸ್ತಿಯೂ ಈ ಕೃತಿಗೆ ಲಭಿಸಿತ್ತು.
ಕಾರವಾರದ ಕಾಸ್ಟಿಕ್ ಸೋಡಾ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿ ವೃತ್ತಿ ಆರಂಭಿಸಿದ ಅವರು ನಂತರ ಮಾಧ್ಯಮ ಕ್ಷೇತ್ರಕ್ಕೆ ತಿರುಗಿ, ಕರಾವಳಿ ಮುಂಜಾವು, ಲೋಕಧ್ವನಿ, ಜನಮಾಧ್ಯಮ ಸೇರಿ ಹಲವು ಪತ್ರಿಕೆಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಹಾಸ್ಯಗಾರರಿಗೆ ದೊರೆತ ಪ್ರಶಸ್ತಿಗಳ ಪೈಕಿ ‘ಸೂರಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಪ್ರಶಸ್ತಿ’ ಪ್ರಮುಖವಾದವು. ಪ್ರಸ್ತುತ ಅವರು ಭಾರತೀಯ ಮತ್ತು ಪಾಶ್ಚಾತ್ಯ ಕಾವ್ಯಮೀಮಾಂಸೆಯ ತುಲನಾತ್ಮಕ ಅಧ್ಯಯನದ ಆಧಾರದಲ್ಲಿ ‘ಭಾರತೀಯ ಕಾವ್ಯ ವಿಲಾಸ’ ಎಂಬ ಹೊಸ ಸಂಶೋಧನಾ ಗ್ರಂಥವನ್ನು ಪ್ರಕಟಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



