ಬಾಲದೀಪ್ತಿ ಪುರಸ್ಕಾರಕ್ಕೆ ಚಿಟ್ಟೇಪಾಲನ ವಿದ್ವಾನ್ ದತ್ತಾತ್ರೇಯ ನಾರಾಯಣ ಗಾಂವ್ಕರ ಆಯ್ಕೆ
ಆಪ್ತ ನ್ಯೂಸ್ ಯಲ್ಲಾಪುರ:
ಧಾರವಾಡದ ಮಕ್ಕಳ ಅಕಾಡೆಮಿಯು ತನ್ನ ರಜತ ಮಹೋತ್ಸವದ ಅಂಗವಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಗೀತ ಶಿಕ್ಷಕ ಯಲ್ಲಾಪುರ ತಾಲೂಕಿನ ಕೊಡ್ಲಗದ್ದೆ ಗ್ರಾಮದ ಚಿಟ್ಟೇಪಾಲನ ವಿದ್ವಾನ್ ದತ್ತಾತ್ರೇಯ ನಾರಾಯಣ ಗಾಂವ್ಕರ ರವರಿಗೆ ಬಾಲದೀಪ್ತಿ ಪುರಸ್ಕಾರ ನೀಡಲು ಆಯ್ಕೆ ಮಾಡಿದೆ.
ಕಳೆದ ಮೂರು ದಶಕಗಳಿಂದ ವಜ್ರಳ್ಳಿಯಲ್ಲಿ ಸರಸ್ವತಿ ಸಂಗೀತ ವಿದ್ಯಾಲಯ ಸ್ಥಾಪಿಸಿ, ಅಪಾರ ಶಿಷ್ಯ ಸಮೂಹಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಅವರಲ್ಲಿ ಸಂಗೀತ ಶಿಕ್ಷಣ ಪಡೆದ ಹರೀಶ ಹೆಗಡೆ, ಉಮೇಶ ಗೌಡ, ಪ್ರಶಾಂತ ಕದಂ ಸೇರಿದಂತೆ ಅನೇಕ ಶಿಷ್ಯರು ಗಮನಾರ್ಹ ಸಾಧನೆ ಮಾಡಿದ್ದಾರೆ. ಸುತ್ತ ಮುತ್ತಲಿನ ಪರಿಸರದಲ್ಲಿನ ಎಳೆಯ ಮಕ್ಕಳಿಗೆ ಸಂಗೀತದ ಪಾಠವನ್ನು ಇಂದಿಗೂ ಹೇಳಿಕೊಡುತ್ತಿದ್ದಾರೆ.
ಮಗ ಶ್ರೀಧರ ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರರು. ಪತ್ನಿ ಜಯಂತಿ ಹಾರ್ಮೋನಿಯಂ ವಾದಕರು. ಕೃಷಿ ಕಾಯಕದ ನಡುವೆ ಸಂಗೀತದ ತಪಸ್ಸನ್ನು ಧಾರೆ ಎರೆಯುವ ದತ್ತಣ್ಣ ಚಿಟ್ಟೇಪಾಲ ಶಾಸ್ತ್ರೀಯವಾಗಿ ಅಧ್ಯಯನ ಉಳ್ಳವರಾಗಿದ್ದಾರೆ. ಸಂಗೀತಪ್ರಿಯರಿಗೆ ಸದಾ ನೆಚ್ಚಿನವರಾಗಿದ್ದಾರೆ.
ಈ ಗೌರವವನ್ನು ಮಕ್ಕಳ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಸಾಧಕರನ್ನು ಅಕಾಡೆಮಿಯೇ ಗುರುತಿಸಿ ನೀಡಲಾಗುತ್ತದೆ. ಅ. 26 ರವಿವಾರ ಸಂಜೆ ನಾಲ್ಕು ಗಂಟೆಗೆ ಧಾರವಾಡದ ಕೆ ಸಿ ಡಿ ಕಾಲೇಜು ಹತ್ತಿರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಪ್ರಶಸ್ತಿ ನೀಡಲಿಗುವುದು ಎಂದು ಅಕಾಡೆಮಿ ಅಧ್ಯಕ್ಷ ಡಾ. ರಾಜನ್ ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



