ಆಪ್ತ ನ್ಯೂಸ್ ಶಿರಸಿ:
ಶಿರಸಿಃ ಸೋಂದಾ ಸ್ವಣವಲ್ಲೀ ಸುಧರ್ಮ ಸಭಾಂಗಣದಲ್ಲಿನಡೆದ ಬೇಡ್ತಿ ಸಮಿತಿ ಪದಾಧಿಕಾರಿಗಳ ಸಭೆ ನಿರಂತರ ಜನಾಂದೋಲನದ ತಯಾರಿ ನಡೆಸಿತು. ಸಮಿತಿ ಗೌರವಾಧ್ಯಕ್ಷರಾದ ಶ್ರೀ ಶ್ರೀಮದ್ ಗಂಗಾಧರೇAದ್ರ ಸರಸ್ವತೀ ಮಹಾಸ್ವಾಮಿಗಳು, ಸ್ವರ್ಣವಲ್ಲೀ ಮಹಾಸಂಸ್ಥಾನ ಅವರು “ಬೇಡ್ತಿ ಅಘನಾಶಿನಿ ಕಣಿವೆಗಳ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮಾಡಲು ಹಲವು ಹಂತಗಳಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ೨೦೨೬ ರ ಜನವರಿ ೧೧ ರಂದು ಶಿರಸಿಯಲ್ಲಿ ಬೃಹತ್ ಜನ ಸಮಾವೇಶ ನಡೆಸಲು ನಿಶ್ಚಯಿಸಲಾಗಿದೆ” ಎಂದು ಪ್ರಕಟಿಸಿದರು. ಜನಪ್ರತಿನಿಧಿಗಳ ಸಂಪರ್ಕ ಆಗಿದೆ. ಅವರು ನಮ್ಮ ಬೇಡ್ತಿ ಜನಾಂದೋಲನ ಬೆಂಬಲಿಸಿದ್ದಾರೆ” ಎಂದು ಸ್ವರ್ಣವಲ್ಲೀ ಶ್ರೀ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೇಡ್ತಿ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು “ಸಧ್ಯ ಬೇಡ್ತಿ ಅಘನಾಶಿನಿ ಫೈಲ್ಗಳು ರಾಜ್ಯ (ನೀರಾವರಿ ಇಲಾಖೆ)ಸರ್ಕಾರದ ಅಂಗಳದಲ್ಲಿದೆ. ಬೇಡ್ತಿ-ವರದಾ ಯೋಜನೆಯ ಪ್ರೀ-ಫಿಸಿಬಿಲಿಟಿ ರಿಪೋರ್ಟ ತಯಾರಾಗಿದೆ. ಡಿ.ಪಿ. ಆರ್. ತಯಾರಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಇನ್ನೂ ಮನವಿ ಮಾಡಿಲ್ಲ. ಈ ಆರಂಭಿಕ ಹಂತದಲ್ಲೇ ನಮ್ಮ ಉ.ಕ. ಜಿಲ್ಲೆಯ ಜನಪ್ರತಿನಿಧಿಗಳು ಒಟ್ಟಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು. ಬೇಡ್ತಿ-ವರದಾ ಯೋಜನೆ ತಿರುವು ಯೋಜನೆಗಳ ತಯಾರಿ ಕುರಿತು ಲಭ್ಯ ಮಾಹಿತಿ ಫೋಟೋ, ನಕ್ಷೆಗಳನ್ನು ಅಶೀಸರ ಅವರು ಬಹಿರಂಗ ಪಡಿಸಿದರು.
ಅಘನಾಶಿನಿ ಕಣಿವೆ ಪ್ರದೇಶದ ಸಂಚಾಲಕರಾದ ಡಾ| ಬಾಲಚಂದ್ರ ಸಾಯಿಮನೆ ಹಾಗೂ ಗೋಪಾಲಕೃಷ್ಣ ತಂಗರ್ಮನೆ ಅವರು ಸದ್ಯದಲ್ಲೇ ಶ್ರೀಮನ್ನೆಲಮಾವು ಮಠದಲ್ಲಿ ಸಭೆ ನಡೆಸಲಿದ್ದೇವೆ. ಅಘನಾಶಿನಿ ಕಣಿವೆ ಜನತೆ ಹೊಸ ಯೋಜನೆ ಬಗ್ಗೆ ಸುದ್ದಿ ತಿಳಿದು ಅಘಾತಗೊಂಡಿದ್ದಾರೆ” ಎಂದು ತಿಳಿಸಿದರು. ಶಾಲ್ಮಲಾ ನದಿ ದಡದಲ್ಲಿ ಸಹಸ್ರಲಿಂಗದಲ್ಲಿ ಅಕ್ಟೋಬರ್ ೧೬ ರಂದು ರ್ಯಾಲಿ ನಡೆಸುವ ವಿವರವನ್ನು ಸಂಚಾಲಕ ಅನಂತ ಭಟ್ ಹುಳಗೋಳ ತಿಳಿಸಿದರು. ಬೇಡ್ತಿ ನದೀ ಸಮೀಪ ತುಂಬೇಬೀಡನಲ್ಲಿ ಅಕ್ಟೋಬರ್ ೨೩ ಬೆಳಿಗ್ಗೆ ರ್ಯಾಲಿ-ಸಭೆ ನಡೆಸುವ ವಿಷಯವನ್ನು ಸಂಚಾಲಕರಾದ ನರಸಿಂಹ ಸಾತೊಡ್ಡಿ ವಿವರಿಸಿದರು. ಅಕ್ಟೋಬರ್ ೨೭ ರಂದು ವಾನಳ್ಳಿಯಲ್ಲಿ ಸಭೆ ನಡೆಯಲಿದೆ ಎಂದು ಸಂಚಾಲಕ ರಾಜಾರಾಮ ತಿಳಿಸಿದರು. ಪಟ್ಟಣದ ಹೊಳೆ ಬಳಿ ಎಫ್ ಡಿ ಮಠದಲ್ಲಿ ಸಭೆ ನಡೆಸುವ ವಿಷಯವನ್ನು ರಾಯಪ್ಪಣ್ಣ ತಿಳಿಸಿದರು. ಪಟ್ಟಣದ ಹೊಳೆಗುಂಟ ನಡೆಸುವ ಪಾದಯಾತ್ರೆ ಬಗ್ಗೆ ಎನ್.ಆರ್.ಹೆಗಡೆ ತಿಳಿಸಿದರು. ಡಾ| ಕೇಶವ ಕೊರ್ಸೆ ಅವರು ನವೆಂಬರ ೨೩ ರಂದು ಶಿರಸಿಯಲ್ಲಿ ವಿಜ್ಞಾನಿಗಳ ಸಮ್ಮೇಳನದಲ್ಲಿ ಪಶ್ಚಿಮ ಘಟ್ಟದ ಮೇಲೆ ನದೀ ಜೋಡಣೆ ಸೇರಿದಂತೆ ಬೃಹತ್ ಯೋಜನೆಗಳ ದುಷ್ಪರಿಣಾಮಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಲಿದ್ದೇವೆ ಎಂದರು.
ಶ್ರೀ ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಕೇಂದ್ರ ಮಾತೃ ಮಂಡಳಿಯ ಗೀತಾ ಶೀಗೆಮನೆ, ಟಿ ಆರ್ ಹೆಗಡೆ, ಮಾಗೋಡು ವೆಂಕಟ್ರಮಣ, ಎಂ. ಕೆ ಭಟ್, ಸೂರ್ಯ ಹಿತ್ಲಳ್ಳಿ, ಶ್ರೀಪಾದ ಶಿರನಾಲ, ಸುರೇಶ ಹಕ್ಕಿಮನೆ, ಆರ್.ಎಸ್ ಹೆಗಡೆ ಮಣ್ಮನೆ, ಗಣಪತಿ ನೀರಗಾನ, ಈಶ್ವರ ಹಸ್ರಗೋಡ ಎಂ.ಜಿ.ಗೆಜ್ಜೆ ಕಿಬ್ಬಳ್ಳಿ, ಮಂಜುನಾಥ ಭಂಡಾರಿ, ಡಾ|ಜಿ ವಿ ಹೆಗಡೆ, ತಮ್ಮಾ ಕುಣಬಿ, ನಾಗೇಶ ನಾಯ್ಕ, ರಾಜು ಪೂಜಾರಿ ಮುಂತಾದವರು ಸಭೆಯಲ್ಲಿ ಪಾಲ್ಗೊಡರು. ೧೫ ಪಂಚಾಯತಗಳು ೨೦ ಸಹಕಾರೀ ಸಂಘಗಳು ಬೇಡ್ತಿ ವರದಾ ಯೋಜನೆ ವಿರೋಧಿಸಿ ನಿರ್ಣಯ ಕೈಗೊಂಡ ದಾಖಲೆಗಳು ಮಂಡಿತವಾಗಿವೆ ಎಂದು ಸಂಚಾಲಕ ಗಣಪತಿ.ಕೆ ತಿಳಿಸಿದರು.