"ನದಿ ತಿರುವು ಬೇಡವೇ ಬೇಡ": ಶ್ರೀಗಳ ಹೋರಾಟಕ್ಕೆ "ಜೈ" ಎಂದ ಕೈ ಶಾಸಕ!

Jan 9, 2026 - 21:04
 0  82
"ನದಿ ತಿರುವು ಬೇಡವೇ ಬೇಡ": ಶ್ರೀಗಳ ಹೋರಾಟಕ್ಕೆ "ಜೈ" ಎಂದ ಕೈ ಶಾಸಕ!

ಆಪ್ತ ನ್ಯೂಸ್‌ ಶಿರಸಿ:

ಮಲೆನಾಡಿನ ಜೀವನಾಡಿಗಳಾದ ಬೇಡ್ತಿ ಹಾಗೂ ಅಘನಾಶಿನಿ ನದಿಗಳ ಹರಿವಿಗೆ ಅಣೆಕಟ್ಟು ಹಾಕುವ ಪ್ರಸ್ತಾಪದ ವಿರುದ್ಧ ಉತ್ತರ ಕನ್ನಡ ಜಿಲ್ಲೆ ಸಿಡಿದು ನಿಂತಿದೆ. ಪರಿಸರ ಉಳಿವಿನ ಈ ಮಹತ್ವದ ಹೋರಾಟದಲ್ಲಿ ಸ್ವರ್ಣವಲ್ಲೀ ಶ್ರೀಗಳ ಹೆಜ್ಜೆಗೆ ಹೆಜ್ಜೆಗೂಡಿಸಲು ಶಾಸಕ ಭೀಮಣ್ಣ ನಾಯ್ಕ ಅವರು ನಿರ್ಧರಿಸಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಶಿರಸಿಯ ತಮ್ಮ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯ ವಿರುದ್ಧದ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಸುದ್ದಿಯ ಪ್ರಮುಖ ಹೈಲೈಟ್ಸ್:

  • ಒಗ್ಗಟ್ಟಿನ ಮಂತ್ರ: "ಇದು ಕೇವಲ ಶ್ರೀಗಳ ಹೋರಾಟವಲ್ಲ, ಇದು ನಮ್ಮೆಲ್ಲರ ಬದುಕಿನ ಪ್ರಶ್ನೆ. ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆಯನ್ನು ಸಾರ್ವಜನಿಕರ ದನಿಯಾಗಿ ನಾವೂ ಒಕ್ಕೊರಲಿನಿಂದ ವಿರೋಧಿಸುತ್ತೇವೆ. ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ಸಮಾವೇಶಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ" ಎಂದು ಶಾಸಕರು ಘೋಷಿಸಿದರು.

  • ತ್ಯಾಗದ ನಾಡಿನ ಆಕ್ರೋಶ: ಉತ್ತರ ಕನ್ನಡ ಜಿಲ್ಲೆಯ ಜನತೆಯ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಭೀಮಣ್ಣ ನಾಯ್ಕ, "ರಾಜ್ಯಕ್ಕೆ ಬೆಳಕು ನೀಡಲು ಶರಾವತಿ, ದೇಶದ ರಕ್ಷಣೆಗೆ ಸೀಬರ್ಡ್, ಕೈಗಾ ಅಣುವಿದ್ಯುತ್ ಹೀಗೆ ಸಾಲು ಸಾಲು ಯೋಜನೆಗಳಿಗೆ ಈ ಜಿಲ್ಲೆ ತನ್ನ ಭೂಮಿಯನ್ನು ತ್ಯಾಗ ಮಾಡಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಅರಣ್ಯ, ಕೃಷಿ ಮತ್ತು ಬದುಕನ್ನು ಮತ್ತೆ ಮತ್ತೆ ಪಣಕ್ಕಿಡುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದರು.

  • ಇಬ್ಬಗೆಯ ನೀತಿ ವಿರುದ್ಧ ಕಿಡಿ: "ರಸ್ತೆ, ರೈಲು ಮಾರ್ಗಗಳಿಗೆ ಪರಿಸರದ ನೆಪವೊಡ್ಡುವ ಅಧಿಕಾರಿಗಳಿಗೆ, ನದಿ ಜೋಡಣೆ ಮಾಡುವಾಗ ಪರಿಸರ ನಾಶ ಕಾಣುವುದಿಲ್ಲವೇ? ಇಂತಹ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೆ ತರುವುದೇ ಆದರೆ, ಇಲ್ಲಿನ ಜನರನ್ನು ನೇರವಾಗಿ ಸಮುದ್ರಕ್ಕೆ ತಳ್ಳಿಬಿಡಿ" ಎಂದು ವ್ಯವಸ್ಥೆಯ ವಿರುದ್ಧ ಹರಿಹಾಯ್ದರು.

  • ಬೊಮ್ಮಾಯಿಗೆ ತಿರುಗೇಟು: ಬೇಡ್ತಿ ನೀರನ್ನು ಕೊಂಡೊಯ್ಯುತ್ತೇವೆ ಎಂಬ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು "ಉದ್ದಟತನದ ಪರಮಾವಧಿ" ಎಂದು ಜರಿದ ಶಾಸಕರು, "ಉತ್ತರ ಕನ್ನಡದ ಜನರ ಭಾವನೆಗಳನ್ನು ಕೆಣಕುವ ಮುನ್ನ ಯೋಚಿಸಿ ಮಾತನಾಡಿ" ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಈ ಕುರಿತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಬಳಿ ಚರ್ಚಿಸಿರುವ ಶಾಸಕರು, ಯೋಜನೆಯನ್ನು ಕೂಡಲೇ ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಶ್ರೀಗಳ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಲೆನಾಡಿನ ನದಿಗಳನ್ನು ಉಳಿಸಿಕೊಳ್ಳುವ ಪಣತೊಟ್ಟಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1