ಆಪ್ತ ನ್ಯೂಸ್ ಶಿವಮೊಗ್ಗ:
ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವ ಯೋಜನೆಗಳನ್ನು ಕೇಂದ್ರ ರಾಜ್ಯ ಸರ್ಕಾರಗಳು ಕೈಬಿಡಬೇಕು. ಪಶ್ಚಿಮ ಘಟ್ಟ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂಬ ಮನವಿ ಪತ್ರವನ್ನು ಬೇಡ್ತಿ ಸಮೀತಿ ಗೌರವಾಧ್ಯಕ್ಷ ಸೋಂದಾ ಸ್ವರ್ಣವಲ್ಲೀ ಸ್ವಾಮೀಜಿಯವರು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ನೀಡಿದರು.
ಶಿವಮೊಗ್ಗಾ ಭಗವದ್ಗೀತಾ ಸಮರ್ಪಣಾ ಸಮಾರಂಭದಲ್ಲಿ ಈ ಮನವಿ ನೀಡಿ ಸಂಕ್ಷಿಪ್ತ ಮಾತುಕತೆ ನಡೆಸಿದರು.
ಸಚಿವ ಕುಮಾರಸ್ವಾಮಿ ಅವರು ಬೇಡ್ತಿ ಸಮೀತಿ ಮನವಿ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರ ಗಮನ ಸೆಳೆಯುವ ಭರವಸೆ ನೀಡಿದರು. ಭಗವದ್ಗೀತಾ ಸಮಾರಂಭದ ನಂತರ ಬೇಡ್ತಿ ಸಮೀತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಪತ್ರದ ವಿವರ ಪ್ರಸ್ತಾಪಿಸಿದರು.
“ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜೊತೆ ದೆಹಲಿಗೆ ಬನ್ನಿ. ಸಚಿವ ಪಾಟೀಲ್ ಅವರನ್ನು ಭೇಟಿ ಮಾಡೋಣ” ಎಂದು ಸಚಿವ ಕುಮಾರಸ್ವಾಮಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಬೇಡ್ತಿ ಮನವಿ ಪತ್ರ ನೀಡಲಾಯಿತು.
ಸ್ವರ್ಣವಲ್ಲೀ ಮಹಾಸಂಸ್ಥಾನದ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ, ಜಿ. ವಿ ಹೆಗಡೆ ಗೊಡ್ವೆಮನೆ, ಆರ್.ಎಸ್.ಹೆಗಡೆ ಭೈರುಂಬೆ. ರಾಮಕೃಷ್ಣ ಶೆರೂಗಾರ್ ಇದ್ದರು.