ಚಲಿಸುವ ರೈಲಿನಿಂದ ಆಯತಪ್ಪಿ ಬಿದ್ದು ಭಟ್ಕಳದ 18ರ ಹರೆಯದ ಯುವಕ ದುರ್ಮರಣ
ಆಪ್ತ ನ್ಯೂಸ್ ಕುಮಟಾ:
ಕಾರವಾರದಿಂದ ಭಟ್ಕಳದತ್ತ ಮುಖಮಾಡಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಪ್ರಾಣಬಿಟ್ಟಿರುವ ಅತ್ಯಂತ ದಾರುಣ ಘಟನೆ ಕುಮಟಾ ಸಮೀಪದ ನುಶಿಕೋಟೆ ರೈಲ್ವೆ ಮಾರ್ಗದಲ್ಲಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಭಟ್ಕಳ ತಾಲೂಕಿನ ತೆಂಗಿನಗುಂಡಿ ಮೂಲದ ಯತೀಂದ್ರ ಲಕ್ಷ್ಮಣ ಮೊಗೇರ (18) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಯತೀಂದ್ರ ಕಾರವಾರದಿಂದ ತನ್ನ ಊರಾದ ಭಟ್ಕಳಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದನು. ರೈಲು ಕುಮಟಾದ ನುಶಿಕೋಟೆ ಬಳಿ ಚಲಿಸುತ್ತಿದ್ದಾಗ, ಆಕಸ್ಮಿಕವಾಗಿ ಆಯತಪ್ಪಿ ಯುವಕ ರೈಲಿನಿಂದ ಕೆಳಗೆ ಬಿದ್ದಿದ್ದಾನೆ. ಭೀಕರವಾಗಿ ಕೆಳಗೆ ಬಿದ್ದ ಪರಿಣಾಮ ಆತನ ತಲೆ ಹಾಗೂ ಕಾಲಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಯತೀಂದ್ರ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ದುರ್ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಗೋಕರ್ಣ ಠಾಣೆ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕ ಆಕಸ್ಮಿಕವಾಗಿ ಜಾರಿ ಬಿದ್ದನೇ ಅಥವಾ ಘಟನೆಗೆ ಬೇರೆ ಯಾವುದಾದರೂ ಕಾರಣಗಳಿವೆಯೇ ಎಂಬ ನಿಖರ ಮಾಹಿತಿ ಕಲೆಹಾಕಲು ಪೊಲೀಸರು ಹೆಚ್ಚಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಭಟ್ಕಳದ ಯುವಕನ ಅಕಾಲಿಕ ನಿಧನದಿಂದಾಗಿ ಆತನ ಕುಟುಂಬದಲ್ಲಿ ಹಾಗೂ ಊರಿನಲ್ಲಿ ನೀರವ ಮೌನ ಮತ್ತು ಆಕ್ರಂದನ ಮುಗಿಲುಮುಟ್ಟಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



