ಪರಿಸರ ಹೋರಾಟಗಾರ ವಿನಾಯಕ ಉಪಾಧ್ಯ ಕಳಚೆ ಹೃದಯಾಘಾತದಿಂದ ನಿಧನ

ಬೇಡ್ತಿ ನದಿ ಹೋರಾಟದ ಸಕ್ರಿಯ ಕಟ್ಟಾಳು ಅಗಲಿಕೆ; ಪರಿಸರ ವಲಯದಲ್ಲಿ ಶೋಕ

Jun 18, 2026 - 11:34
 0  219
ಪರಿಸರ ಹೋರಾಟಗಾರ ವಿನಾಯಕ ಉಪಾಧ್ಯ ಕಳಚೆ ಹೃದಯಾಘಾತದಿಂದ ನಿಧನ

ಆಪ್ತ ನ್ಯೂಸ್‌ ಕನಕನಹಳ್ಳಿ:

ಪರಿಸರ ಸಂರಕ್ಷಣೆ, ಸಾಮಾಜಿಕ ಸೇವೆ ಹಾಗೂ ವಿವಿಧ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪರಿಸರ ಹೋರಾಟಗಾರ ವಿನಾಯಕ ಉಪಾಧ್ಯ ಕಳಚೆ (ಮೂಲ ನಿವಾಸಿ ಕಳಚೆ, ಹಾಲಿ ನಿವಾಸ ಕನಕನಹಳ್ಳಿ) ಅವರು ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾದರು. ಅವರ ಅಗಲಿಕೆಯಿಂದ ಪರಿಸರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.

ವಿನಾಯಕ ಉಪಾಧ್ಯ ಅವರು ವೃಕ್ಷಲಕ್ಷ ಆಂದೋಲನದ ಸಕ್ರಿಯ ಕಾರ್ಯಕರ್ತರಾಗಿದ್ದು, ಪರಿಸರ ಸಂರಕ್ಷಣೆ ಹಾಗೂ ವೃಕ್ಷಾರೋಪಣೆಯಂತಹ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜಮುಖಿ ಸೇವೆ ಸಲ್ಲಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ಬೇಡ್ತಿ ನದಿ ತಿರುವು ಯೋಜನೆ ವಿರೋಧಿ ಹೋರಾಟದಲ್ಲಿಯೂ ಅವರು ಪ್ರಮುಖ ಪಾತ್ರವಹಿಸಿ, ಪರಿಸರ ಸಂರಕ್ಷಣೆಯ ಪರವಾಗಿ ನಿರಂತರ ಧ್ವನಿಯಾಗಿದ್ದರು.

ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸ್ನೇಹಿತರು, ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.

ವಿನಾಯಕ ಉಪಾಧ್ಯ ಕಳಚೆ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕುಟುಂಬಸ್ಥರಿಗೆ ಹಾಗೂ ಆತ್ಮೀಯರಿಗೆ ಕರುಣಿಸಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0