ಬೇಡ್ತಿ-ವರದಾ ನದಿ ಜೋಡಣೆ: ಬಿಜೆಪಿ ನೆಟ್ಟ ಬೀಜಕ್ಕೆ ನೀರೆರೆಯುತ್ತಿರುವ ಕಾಂಗ್ರೆಸ್‌! ಮಂಕಾಳ್‌ ವೈದ್ಯ ಆರೋಪ ಹಾಗೂ ವಾಸ್ತವಾಂಶ ! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಘೋಷಣೆ/ಆರಂಭ: ಬಿ.ಎಸ್. ಯಡಿಯೂರಪ್ಪ (2021) ವರದಿ ತಯಾರಕರು: ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರ (NWDA) ಪ್ರಕ್ರಿಯೆ ಮುಂದುವರಿಸಿದವರು: ಬಸವರಾಜ ಬೊಮ್ಮಾಯಿ (2022) ಅಂತಿಮ ಡಿಪಿಆರ್ ತಯಾರಿಸಲು ಈಗ ಒಪ್ಪಿಗೆ ನೀಡಿದವರು: ಡಿ.ಕೆ. ಶಿವಕುಮಾರ್ (2025)

Jan 12, 2026 - 17:39
 0  262
ಬೇಡ್ತಿ-ವರದಾ ನದಿ ಜೋಡಣೆ: ಬಿಜೆಪಿ ನೆಟ್ಟ ಬೀಜಕ್ಕೆ ನೀರೆರೆಯುತ್ತಿರುವ ಕಾಂಗ್ರೆಸ್‌! ಮಂಕಾಳ್‌ ವೈದ್ಯ ಆರೋಪ ಹಾಗೂ ವಾಸ್ತವಾಂಶ !  ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಆಪ್ತ ವಿಶೇಷ

***************

ಬೇಡ್ತಿ-ವರದಾ ನದಿ ಜೋಡಣೆ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಭಾನುವಾರ ಬೃಹತ್‌ ಜನಸಮಾವೇಶ ನಡೆಯಿತು. ಸ್ವರ್ಣವಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚಿನ ಜನರು ಸಭೆಯಲ್ಲಿ ಪಾಲ್ಗೊಂಡು ಉತ್ತರ ಕನ್ನಡ ಜಿಲ್ಲೆಗೆ ಮಾರಕವಾದ ಯೋಜನೆಗಳು ಬೇಡವೇ ಬೇಡ ಎನ್ನುವ ಆಗ್ರಹ ಮಾಡಿದರಲ್ಲೇ ಮಾರಕ ಯೋಜನೆಗಳನ್ನು ವಿರೋಧಿಸಿ, ಧ್ವನಿಯನ್ನು ಸರ್ಕಾರದ ಮಟ್ಟಕ್ಕೆ ತಲುಪುವಂತೆ ಮಾಡಿದರು.

ಆದರೆ ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಬೇಡ್ತಿ-ವರದಾ ನದಿ ಜೋಡಣೆ ಪ್ರಸ್ತಾಪವಾಗಿದ್ದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಆ ಸಂದರ್ಭದಲ್ಲಿ ವಿಶ್ವೇಶ್ವರ ಹೆಗಡೆ ಅವರು ಸ್ಪೀಕರ್‌ ಆಗಿದ್ದರು. ಆ ಸಂದರ್ಭದಲ್ಲಿ ಕಾಗೇರಿಯವರು ಏನೂ ಮಾತಾಡಿರಲಿಲ್ಲ ಎನ್ನುವ ಗಂಭೀರ ಆರೋಪ ಮಾಡಿದರು. ಆದರೆ ಆ ಸಂದರ್ಭದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು ಯಾರಾಗಿದ್ದರು? ಅವರ ಅಭಿಪ್ರಾಯ ಏನಾಗಿತ್ತು ಎನ್ನುವುದರ ಕುರಿತು ಮಂಕಾಳು ವೈದ್ಯ ಏನೂ ಹೇಳದೇ ಇದ್ದುದು ಸಾಕಷ್ಟು ಅಚ್ಚರಿಗೆ ಕಾರಣವಾಯಿತು.

ಮಂಕಾಳು ವೈದ್ಯ ಅವರ ಆರೋಪದ ಬೆನ್ನು ಹತ್ತಿ ಹೊರಟ ಆಪ್ತ ನ್ಯೂಸ್‌ ಬಜೆಟ್‌ ಕುರಿತಂತೆ ಮಾಹಿತಿ ಸಂಗ್ರಹ ಮಾಡಿತು. ಯಡಿಯೂರಪ್ಪ ಅವರ ಅವಧಿಯಲ್ಲಿ ಯೋಜನೆ ಪ್ರಸ್ತಾಪ ಆಗಿತ್ತೇ ಎನ್ನುವದರ ಕುರಿತು ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿತು. ಆಪ್ತ ನ್ಯೂಸ್‌ ಸಂಗ್ರಹಿಸಿದ ಮಾಹಿತಿ ಇಲ್ಲಿದೆ ನೋಡಿ


2021-22ರ ಬಜೆಟ್‌ನಲ್ಲಿ ಏನಾಗಿತ್ತು?
 
ಯಡಿಯೂರಪ್ಪ ಅವರು 2021ರ ಮಾರ್ಚ್ 8 ರಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ, ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ವಿಸ್ತೃತ ಯೋಜನಾ ವರದಿ (Detailed Project Report - DPR) ತಯಾರಿಸಲು ಘೋಷಣೆ ಮಾಡಿದ್ದರು.
 
ಪ್ರಸ್ತಾವನೆ:
ಇದು ಯೋಜನೆ ಜಾರಿಗೊಳಿಸುವ ಘೋಷಣೆಯಾಗಿರಲಿಲ್ಲ, ಬದಲಿಗೆ ಈ ಯೋಜನೆ ಸಾಧ್ಯವಿದೆಯೇ ಎಂದು ಪರಿಶೀಲಿಸಲು ಮತ್ತು ವರದಿ ತಯಾರಿಸಲು ಮಾಡಿದ ಪ್ರಸ್ತಾವನೆಯಾಗಿತ್ತು.

ಉದ್ದೇಶ:
ಉತ್ತರ ಕನ್ನಡದ ಪಶ್ಚಿಮಕ್ಕೆ ಹರಿಯುವ ನೀರನ್ನು ಹಾವೇರಿ ಮತ್ತು ಗದಗ ಜಿಲ್ಲೆಗಳ ಕಡೆಗೆ ತಿರುಗಿಸುವುದು ಇದರ ಉದ್ದೇಶ ಎಂದು ಬಜೆಟ್ ಭಾಷಣದಲ್ಲಿ ಹೇಳಲಾಗಿತ್ತು.
 
ವರದಿ ಮಂಡನೆಯಾಗಿತ್ತೇ?
 
ಬಜೆಟ್ ಅಧಿವೇಶನದ ಸಮಯದಲ್ಲಿ ಯಾವುದೇ ಪೂರ್ಣ ಪ್ರಮಾಣದ ವರದಿ (Report) ಮಂಡನೆಯಾಗಿರಲಿಲ್ಲ. ಬಜೆಟ್‌ನಲ್ಲಿ ಕೇವಲ ಪ್ರಸ್ತಾಪ (Proposal) ಮಾಡಲಾಗಿತ್ತು.
 
ಆದರೆ, ಬಜೆಟ್ ಘೋಷಣೆಯ ನಂತರ ಈ ಪ್ರಕ್ರಿಯೆ ಚುರುಕುಗೊಂಡಿತು. ಇದರ ಪರಿಣಾಮವಾಗಿ, ಆಗಸ್ಟ್ 2021ರಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರ (NWDA) ಒಂದು ‘ಪೂರ್ವ-ಸಾಧ್ಯತಾ ವರದಿ’ಯನ್ನು (Pre-feasibility report) ರಾಜ್ಯ ಸರ್ಕಾರಕ್ಕೆ ಸಲ್ಲಿಸಿತು (ಆಗ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು).
 
ಯಡಿಯೂರಪ್ಪ ಅವರ 2008-2011ರ ಅವಧಿಯಲ್ಲಿ ಏನಾಗಿತ್ತು?
 
ಯಡಿಯೂರಪ್ಪ ಅವರ ಮೊದಲ ಅವಧಿಯಲ್ಲೂ (2008-11) ಈ ವಿಷಯ ಚರ್ಚೆಯಲ್ಲಿತ್ತು, ಆದರೆ ಆಗ ಯಾವುದೇ ಅಧಿಕೃತ ವರದಿ ವಿಧಾನಸಭೆಯಲ್ಲಿ ಮಂಡನೆಯಾದ ದಾಖಲೆಗಳಿಲ್ಲ. ಆಗ ಹೆಚ್ಚು ಚರ್ಚೆಯಲ್ಲಿದ್ದದ್ದು 'ನೇತ್ರಾವತಿ ನದಿ ತಿರುವು' (ಎತ್ತಿನಹೊಳೆ) ಯೋಜನೆ. ಬೇಡ್ತಿ-ವರದಾ ವಿಷಯವು ಸ್ಥಳೀಯ ಮಟ್ಟದ ವಿರೋಧದಿಂದಾಗಿ ದೊಡ್ಡ ಮಟ್ಟದಲ್ಲಿ ಮುನ್ನೆಲೆಗೆ ಬಂದಿರಲಿಲ್ಲ.
 
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಯಡಿಯೂರಪ್ಪನವರ ಕಾಲದಲ್ಲಿ (2021) ವಿಧಾನಸಭೆಯಲ್ಲಿ ಯೋಜನೆಯ ಪ್ರಸ್ತಾಪವಾಯಿತು (ಬಜೆಟ್ ಮೂಲಕ), ಆದರೆ ವರದಿ ಮಂಡನೆ (Tabled Report) ಆಗಿರಲಿಲ್ಲ. ವರದಿ ತಯಾರಿಸಲು ಆದೇಶ ನೀಡಲಾಗಿತ್ತಷ್ಟೇ.

ಈ ಯೋಜನೆ ಕುರಿತಂತೆ ಮುಂದಿನ ಹಂತಗಳ ಕುರಿತು ಆಪ್ತ ನ್ಯೂಸ್‌ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿತು. ಆಗ ಸಿಕ್ಕ ಮಾಹಿತಿಗಳು ಹಲವು ಸಂದೇಹಗಳಿಗೆ ಉತ್ತರವನ್ನು ನೀಡಿತು. ಮಂಕಾಳ್‌ ವೈದ್ಯರ ಆರೋಪಗಳಿಗೆ ಉತ್ತರವನ್ನು ನೀಡುವ ಪ್ರಯತ್ನವೂ ನಡೆಯಿತು.

ಬಿಜೆಪಿ ನೆಟ್ಟ ಬೀಜಕ್ಕೆ ಕಾಂಗ್ರೆಸ್‌ ನೀರೆರೆಯುತ್ತಿದೆಯೇ?

ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ (DPR) ಮತ್ತು ಸರ್ವೆ ನಡೆಸುವ ಆದೇಶದ ಹಿಂದೆ, ಕೇಂದ್ರದ ಸಂಸ್ಥೆ ಮತ್ತು ರಾಜ್ಯದ ವಿವಿಧ ಸರ್ಕಾರಗಳ ಪಾತ್ರವಿದೆ. 

ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರ (NWDA) ಈ ಯೋಜನೆಯ ಡಿಪಿಆರ್ ಸಿದ್ಧಪಡಿಸುತ್ತಿದೆ. ಆದರೆ ರಾಜ್ಯ ಮಟ್ಟದಲ್ಲಿ ಇದಕ್ಕೆ ಚಾಲನೆ ಮತ್ತು ಆದೇಶ ನೀಡಿದವರು ಬಿ.ಎಸ್. ಯಡಿಯೂರಪ್ಪ (2021ರ ಬಜೆಟ್‌ನಲ್ಲಿ ಘೋಷಣೆ) ಮತ್ತು ನಂತರ ಬಸವರಾಜ ಬೊಮ್ಮಾಯಿ (ಕರಡು ವರದಿ ಸ್ವೀಕಾರ). ಪ್ರಸ್ತುತ (2025-26) ಡಿ.ಕೆ. ಶಿವಕುಮಾರ್ ಅವರು ಇದಕ್ಕೆ ಅಂತಿಮ ಒಪ್ಪಿಗೆ ನೀಡಿದ್ದಾರೆ.

ಇದರ ಸಂಪೂರ್ಣ ವಿವರ ಇಲ್ಲಿದೆ ನೋಡಿ

1. ಆರಂಭಿಕ ಆದೇಶ ಮತ್ತು ಘೋಷಣೆ (ಬಿ.ಎಸ್. ಯಡಿಯೂರಪ್ಪ)

  • ಘೋಷಣೆ: 2021-22ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಯೋಜನೆಗೆ 'ವಿಸ್ತೃತ ಯೋಜನಾ ವರದಿ' (DPR) ಸಿದ್ಧಪಡಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದರು.

  • ಆದೇಶ: ರಾಜ್ಯ ಜಲಸಂಪನ್ಮೂಲ ಇಲಾಖೆಗೆ ಮತ್ತು ಸಂಬಂಧಪಟ್ಟ ನಿಗಮಗಳಿಗೆ (ವಿಶ್ವೇಶ್ವರಯ್ಯ ಜಲ ನಿಗಮ - VJNL) ಈ ಕುರಿತು ಕಾರ್ಯಪ್ರವೃತ್ತರಾಗಲು ಸೂಚನೆ ನೀಡಲಾಗಿತ್ತು.

2. ವರದಿ ತಯಾರಿಸಿದ್ದು ಯಾರು? (NWDA ಪಾತ್ರ)

ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಮತ್ತು ಕೇಂದ್ರದ ನದಿ ಜೋಡಣೆ ಯೋಜನೆಯ ಭಾಗವಾಗಿ, ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರ (NWDA - National Water Development Agency) ಈ ಯೋಜನೆಯ ತಾಂತ್ರಿಕ ಅಧ್ಯಯನ ನಡೆಸಿತು.

  • ಆಗಸ್ಟ್ 2021: NWDA ಸಂಸ್ಥೆಯು ಯೋಜನೆಗೆ ಸಂಬಂಧಿಸಿದ 'ಪೂರ್ವ ಸಾಧ್ಯತಾ ವರದಿ'ಯನ್ನು (Pre-feasibility Report) ರಾಜ್ಯ ಸರ್ಕಾರಕ್ಕೆ ಸಲ್ಲಿಸಿತು.

  • ಫೆಬ್ರವರಿ 2022: NWDA ಸಂಸ್ಥೆಯು 'ಕರಡು ಡಿಪಿಆರ್' (Draft DPR) ಅನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಸಲ್ಲಿಸಿತು.

3. ಬಸವರಾಜ ಬೊಮ್ಮಾಯಿ ಅವರ ಪಾತ್ರ

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ (2021-2023), ಈ ಯೋಜನೆಗೆ ವೇಗ ನೀಡಿದರು.

  • ಅವರು ಈ ಯೋಜನೆಯನ್ನು "ಪರಿಷ್ಕೃತ ಯೋಜನೆ" ಎಂದು ಕರೆದರು.

  • ಹಳೆಯ ಯೋಜನೆಯಂತೆ ದೊಡ್ಡ ಡ್ಯಾಂ ಕಟ್ಟುವ ಬದಲು, ನೀರನ್ನು ಲಿಫ್ಟ್ (Lift) ಮಾಡುವ ಮೂಲಕ ಪರಿಸರ ಹಾನಿ ಕಡಿಮೆ ಮಾಡಲು NWDA ಗೆ ಸಲಹೆ ನೀಡಿದ್ದರು.

4. ಈಗಿನ ಆದೇಶ (ಡಿಸೆಂಬರ್ 2025 - ಡಿ.ಕೆ. ಶಿವಕುಮಾರ್)

ಇತ್ತೀಚೆಗೆ (ಡಿಸೆಂಬರ್ 2025) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಗೆ "ತಾತ್ವಿಕ ಒಪ್ಪಿಗೆ" (In-principle approval) ನೀಡಿದ್ದಾರೆ.

  • ಇದರರ್ಥ, ಕೇಂದ್ರದ NWDA ಸಂಸ್ಥೆಗೆ "ನೀವು ಅಂತಿಮ ಡಿಪಿಆರ್ (Final DPR) ತಯಾರಿಸಿ, ನಾವು ಅದಕ್ಕೆ ಸಹಕಾರ ನೀಡುತ್ತೇವೆ" ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ.


ನಿನ್ನೆ ನಡೆದ ಸಭೆಯಲ್ಲಿ ಮಾತಾಡುವ ಸಂದರ್ಭದಲ್ಲಿ ಜಾಣತನವನ್ನು ಮೆರೆದಿರುವ ಮಂಕಾಳು ವೈದ್ಯ, ಸಂಸದ ಕಾಗೇರಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರು, ಆದರೆ ಡಿ. ಕೆ. ಶಿವಕುಮಾರ ಅವರ ಪಾತ್ರದ ಕುರಿತು ಒಂದೇ ಒಂದು ಮಾತನ್ನೂ ಸಹ ಹೇಳಲಿಲ್ಲ. ಅಷ್ಟೇ ಅಲ್ಲ, ಡಿ. ಕೆ. ಶಿವಕುಮಾರ್‌ ಅವರು ಉತ್ತರ ಕನ್ನಡ ಜಿಲ್ಲೆಗೆ ಬಂದು ಈ ಯೋಜನೆ ಕುರಿತು ಹೇಳಿಕೆ ನೀಡುತ್ತಿದ್ದ ಸಂದರ್ಭದಲ್ಲಿ ಮಂಕಾಳು ವೈದ್ಯ ಕೂಡ ಯಾವುದೇ ಮಾತನಾಡಲಿಲ್ಲ. ಈ ಮೂಲಕ ಮಂಕಾಳ್‌ ವೈದ್ಯ ಕೂಡ ಮೌನ ವಹಿಸಿದ್ದರು. ಅಷ್ಟೇ ಅಲ್ಲ, ಅದೇ ಸಭೆಯಲ್ಲಿದ್ದ ಭೀಮಣ್ಣ ನಾಯ್ಕ್‌ ಕೂಡ ಈ ಕುರಿತಂತೆ ಸೊಲ್ಲೆತ್ತಿರಲಿಲ್ಲ! 




What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0