ರಜತ ಸಂಭ್ರಮದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ : ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಸ್ವತ್ತು : ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ

Dec 13, 2025 - 22:34
 0  17
ರಜತ ಸಂಭ್ರಮದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ : ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಸ್ವತ್ತು : ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ
ಆಪ್ತ ನ್ಯೂಸ್‌ ದಾಂಡೇಲಿ:
ಕನ್ನಡ ಸಾಹಿತ್ಯ ಪರಿಷತ್ತು ಯಾರ ಗುತ್ತಿಗೆಯು ಅಲ್ಲ, ಅದು ಕನ್ನಡಿಗರ ಸ್ವತ್ತು. ಸರ್ವಾಧಿಕಾರಿ ಧೋರಣೆ ಯಾವುದೇ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಗೌರವ ತರುವಂತಹದ್ದಲ್ಲ. ಕುರ್ಚಿಯಲ್ಲಿ ಕೂತ ಮನುಷ್ಯ ಕುಬ್ಜನಾಗಬಾರದು. ಅದು ಪ್ರಜಾಪ್ರಭುತ್ವದ ಸೊಬಗಲ್ಲ. ಕುರ್ಚಿಗಿಂತ ಮನುಷ್ಯ ದೊಡ್ಡವನಾಗಿರಬೇಕು ಎಂಬುವುದೇ ಪ್ರಜಾಪ್ರಭುತ್ವದ ನಿಜವಾದ ಮೌಲ್ಯ. ಇವತ್ತು ಏನಾದರೂ ಕನ್ನಡ ಉಳಿದರೇ ಅದು ಸಾಮಾನ್ಯ ಕನ್ನಡಿಗರದಿಂದ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಸಾಮಾನ್ಯ ಕನ್ನಡಿಗರಿಗೆ ಕನ್ನಡ ಬದುಕಿನ ಭಾಷೆಯಾಗಿದೆ. ಕನ್ನಡವನ್ನು ಉಳಿಸಿ ಬೆಳೆಸಿದವರು ಸಾಮಾನ್ಯ ಕನ್ನಡಿಗರು ಎನ್ನುವುದನ್ನು ನಾವು ನೀವೆಲ್ಲರೂ ಹೃದಯದಿಂದ ಒಪ್ಪಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಮಾನ್ಯ ಕನ್ನಡಿಗರ ಭಾವನೆಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಪ್ರತಿಯೊಬ್ಬ ಕನ್ನಡಿಗನಿಂದ ಸದಾ ಆಗಬೇಕೆಂದು ನಾಡಿನ ಹಿರಿಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ನುಡಿದರು.
 
ಅವರು ಶನಿವಾರ  ದಾಂಡೇಲಿ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ರಜತ ಸಂಭ್ರಮದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಮಾನ್ಯ ಜನರ ಮೇಲೆ ನಂಬಿಕೆ ಇಟ್ಟುಕೊಂಡವರು ಶಕ್ತಿಯುತವಾಗಿ ಬೆಳೆಯಬಲ್ಲರು. ಕನ್ನಡವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಆಡಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ. ಅಳಿಸಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿಯು ಕನ್ನಡಕ್ಕಿದೆ. ಆ ಕಾರಣಕ್ಕಾಗಿಯೇ ಕನ್ನಡದ ಸಂವೇದನೆಗಳಲ್ಲಿ ಮತ್ತು  ಆಶಯಗಳಲ್ಲಿರುವ ಮೌಲ್ಯಗಳನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಅವರು ಈ ಜಿಲ್ಲೆಯ ಹೆಮ್ಮೆಯ ಸಾಧಕ ವಿಠ್ಠಲ ಭಂಡಾರಿ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ವಾಸರೆಯವರ ನೇತೃತ್ವದಲ್ಲಿ ನಿರೀಕ್ಷೆಗೂ ಮೀರಿ ಅದ್ಭುತವಾಗಿ ಅವಿಸ್ಮರಣೀಯವಾಗಿ ದಾಂಡೇಲಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಾಗಿರುವುದು ನನಗಂತೂ ಅತೀವ ಸಂತಸ ತಂದಿದೆ ಎಂದು ಸಮ್ಮೇಳನದ ಆಯೋಜನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿ ೨೫ ಕೃತಿಗಳ ಬಿಡುಗಡೆ


ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೨೫ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆಯವರು ಕನ್ನಡದ ಕಾರ್ಯಕ್ರಮಗಳನ್ನು ಕನ್ನಡದ ಕೆಲಸಗಳನ್ನು ಯಾರೇ ಮಾಡಿದರೂ ಕನ್ನಡಿಗರಾದ ನಾವು ಅದನ್ನು ಹೆಮ್ಮೆಯಿಂದ ಸ್ವಾಗತಿಸಬೇಕು ಮತ್ತು ಗೌರವಿಸಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ವಿಕಾಸದಲ್ಲಿ ಸಾಹಿತ್ಯ ಸಮ್ಮೇಳನಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವುಗಳು ಇಂದಿನ ಪೀಳಿಗೆಯಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ, ಅರಿವು ಬೆಳೆಸುವ ಶಕ್ತಿಯುತ ವೇದಿಕೆಗಳಾಗಿವೆ. ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿಂತಕರು ಮತ್ತು ಸಾಹಿತಿಗಳ ವಿಚಾರ ವಿನಿಮಯದ ಮೂಲಕ ಈ ಸಮ್ಮೇಳನವು ಸಾರ್ಥಕತೆಯನ್ನು ಪಡೆದು ಯಶಸ್ವಿಯಾಗಲಿ. ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ವೈವಿಧ್ಯಮಯ ಸಂಸ್ಕೃತಿ, ಪ್ರತಿಭೆ ಮತ್ತು ಸೃಜನಶೀಲತೆಯನ್ನು ದೇಶಾದ್ಯಂತ ಪರಿಚಯಿಸುವ ಮಹತ್ವದ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.


ಸಮ್ಮೇಳನ ಅಧ್ಯಕ್ಷರ ಭಾಷಣ

ಸಮ್ಮೇಳನದ ಸರ್ವಾಧ್ಯಕ್ಷರಾದ ರೋಹಿದಾಸ ನಾಯಕ ಮಾತನಾಡಿ ಕನ್ನಡ ನಾಡಿನ ಜಿಲ್ಲೆಗಳಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಯು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಜಿಲ್ಲೆ. ಇಲ್ಲಿನ ಅರಣ್ಯ ಸಂಪತ್ತು, ಇಲ್ಲಿನ ನಿಸರ್ಗ, ಕಡಲು, ನದಿಗಳು ಈ ಜಿಲ್ಲೆಯ ಪರಂಪರೆ, ಸಂಸ್ಕೃತಿ, ಇತಿಹಾಸ, ಕಲೆ ಮತ್ತು ಯಕ್ಷಗಾನ, ಜನಪದ ಸಾಹಿತ್ಯ ಹಾಗೂ ಗುಡಿ ಕೈಗಾರಿಕೆಗಳು ಈ ಜಿಲ್ಲೆಯ ಸೊಬಗನ್ನು ಹೆಚ್ಚಿಸಿವೆ. ಜಿಲ್ಲೆಯಲ್ಲಿ ಬಿ.ಎನ್ ವಾಸರೆಯವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯದಲ್ಲೆ ಗಮನ ಸೆಳೆದಿದೆ. ವಿನೂತನ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲೆಯ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ ಎಂದ ಅವರು ಮೂರು ಬಾರಿ ಜಿಲ್ಲೆಯ ಸಾಹಿತ್ಯ ಪರಿಷತ್ತನ್ನು‌ ಮುನ್ನಡೆಸಿದ ನನ್ನನ್ನು ನನ್ನ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ಈ ಬಾರಿಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನನ್ನ ಭಾಗ್ಯ ಎಂದರು. ಜೀವನದ ಕಟ್ಟ ಕಡೆಯ ಉಸಿರು ಇರುವವರೆಗೂ ಕನ್ನಡಕ್ಕಾಗಿ, ಕನ್ನಡದ ಸೇವೆಗಾಗಿ ಸದಾ ನನ್ನನ್ನು ನಾನು ತೊಡಗಿಸಿಕೊಳ್ಳುವುದಾಗಿ ಹೇಳಿದರು.

ಬಿ.ಎನ.ವಾಸರೆಯವರ ಆಶಯ ನುಡಿ


ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎನ್.ವಾಸರೆ ಅವರು ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಡೆಯಬೇಕೆಂದು ಸಾಕಷ್ಟು ಅಡೆಯನ್ನು ತಂದು, ಸಮ್ಮೇಳನದ ಕೊನೆಯ ಎರಡು ದಿನ ನ್ಯಾಯಾಲಯದಲ್ಲೇ ದಿನ ಕಳೆಯುವಂತಹ ಸಂದಿಗ್ಧ ಪರಿಸ್ಥಿತಿಯನ್ನು ತರಲಾಯ್ತದಾದರೂ, ಅಂತಿಮವಾಗಿ ಕನ್ನಡ ಗೆದ್ದಿತು. ಈ ಗೆಲುವು ನನ್ನ ಗೆಲುವಲ್ಲ. ಇದು ಜಿಲ್ಲೆಯ ಕನ್ನಡಿಗರ ಗೆಲುವು, ಇದು ಕನ್ನಡದ ಗೆಲುವು. ಸಾಹಿತ್ಯ ಸಮ್ಮೇಳನವನ್ನು ನಡೆಸಲು ಅನುವು ಮಾಡಿಕೊಟ್ಟ ಘನ ನ್ಯಾಯಾಲಯಕ್ಕೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದ ಅವರು ಕನ್ನಡದ ಕೆಲಸ, ಕನ್ನಡದ ಕಾರ್ಯಕ್ರಮ ಯಾರೇ ಮಾಡಿದರೂ ಅದನ್ನು ಗೌರವಿಸಬೇಕು, ಅದಕ್ಕೆ ಸ್ಪಂದಿಸಬೇಕು. ಅದು ಬಿಟ್ಟು ವೈಯಕ್ತಿಕ ದ್ವೇಷ ಸಾಧನೆಗಾಗಿ ಕನ್ನಡದ ಕೆಲಸಕ್ಕೆ ಯಾರೇ ಅಡ್ಡಿ ಮಾಡಿದರೂ ಅದನ್ನು ಸಮಾಜ ಗೌರವಿಸುವುದಿಲ್ಲ. ವಿಚಾರಣೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರ ಕುಟಿಲ ಬುದ್ದಿಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು. ತಮ್ಮ ಮಾತಿನ ಸಂದರ್ಭದಲ್ಲಿ ಗದ್ಗತಿತರಾದ ವಾಸರೆಯವರು ಇಡೀ ಸಭೆಯನ್ನು ತನ್ನತ್ತ ಸೆಳೆದುಕೊಂಡರು. ಈ ಕ್ಷೇತ್ರ ಸತ್ಪುರುಷ ದಾಂಡೇಲಪ್ಪನ ಕ್ಷೇತ್ರ. ಶ್ರೀ ದಾಂಡೇಲಪ್ಪನ ಅನುಗ್ರಹದಿಂದ ಹಾಗೂ ಜಿಲ್ಲೆಯ ಸಮಸ್ತ ಕನ್ನಡಿಗರ ಸಹಕಾರದಿಂದ ನಿರೀಕ್ಷೆಗೂ ಮೀರಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.






What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0