ಅಘನಾಶಿನಿ–ವೇದಾವತಿ ನದಿ ಜೋಡಣೆ: ಶಿರಸಿ–ಸಿದ್ದಾಪುರ–ಕುಮಟಾ–ಹೊನ್ನಾವರ ಕುಡಿಯುವ ನೀರಿನ ಸಂಕಷ್ಟ ಖಚಿತವೇ? 

Jan 10, 2026 - 12:38
 0  69
ಅಘನಾಶಿನಿ–ವೇದಾವತಿ ನದಿ ಜೋಡಣೆ: ಶಿರಸಿ–ಸಿದ್ದಾಪುರ–ಕುಮಟಾ–ಹೊನ್ನಾವರ ಕುಡಿಯುವ ನೀರಿನ ಸಂಕಷ್ಟ ಖಚಿತವೇ? 
~ಡಾ ರವಿಕಿರಣ ಪಟವರ್ಧನ.
**********

ಅಘನಾಶಿನಿ ನದಿ ಜೋಡಣೆ ಯೋಜನೆಯನ್ನು "ಕುಡಿಯುವ ನೀರಿಗಾಗಿ" ಎಂಬ ಹೆಸರಿನಲ್ಲಿ . ಆದರೆ ನಿಜವಾದ ಚಿತ್ರ ಬೇರೆಯೇ ಇದೆ. ಈ ಯೋಜನೆ ಜಾರಿಯಾದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಕುಡಿಯುವ ನೀರಿನ ಭೀಕರ ಕ್ಷಾಮ ಎದುರಾಗಲಿದೆ ಎಂಬ ಆತಂಕಕ್ಕೆ ಬಲವಾದ ತಾಂತ್ರಿಕ ಮತ್ತು ನೈಸರ್ಗಿಕ ಕಾರಣಗಳಿವೆ.
 
*1. ಕುಡಿಯುವ ನೀರಿನ ಮೂಲಕ್ಕೇ ಅಪಾಯ*
ಅಘನಾಶಿನಿಯ ಮೇಲ್ಭಾಗದಲ್ಲಿ ನೀರನ್ನು ತಡೆದು ವೇದಾವತಿಗೆ ತಿರುಗಿಸಿದರೆ, ಕೆಳಭಾಗದಲ್ಲಿರುವ ಕುಡಿಯುವ ನೀರಿನ ಯೋಜನೆಗಳು ಸಂಪೂರ್ಣ ಸ್ಥಗಿತಗೊಳ್ಳುತ್ತವೆ.
 
ಕುಮಟಾ-ಹೊನ್ನಾವರ ಜಂಟಿ ಯೋಜನೆಯು ಈಗಾಗಲೇ ಮರಾಕಲ್ ಬಳಿ ನೀರಿನ ಮಟ್ಟ ಕುಸಿತವನ್ನು ಎದುರಿಸುತ್ತಿದೆ. ಹೊನ್ನಾವರಕ್ಕೆ ಹರಿಯುವ ನೀರನ್ನು ಈಗಾಗಲೇ ಕಡಿತಗೊಳಿಸಲಾಗುತ್ತಿರುವಾಗ, ನದಿಯ ಮೂಲವನ್ನೇ ತಿರುಗಿಸಿದರೆ ಈ ಪಟ್ಟಣಗಳಿಗೆ ನೀರು ಪೂರೈಕೆ ಅಸಾಧ್ಯವಾಗುತ್ತದೆ.
 
ಶಿರಸಿಯ ಮಾರಿಗದ್ದೆ ಅನುಭವವನ್ನು ಮರೆಯಲು ಸಾಧ್ಯವಿಲ್ಲ. ಎರಡು ಮೂರು ವರ್ಷಗಳ ಹಿಂದೆ ನೀರು ಕಡಿಮೆಯಾಗಿ ಜನರಿಗೆ 3-4 ದಿನಕ್ಕೊಮ್ಮೆ ಮಾತ್ರ ಕುಡಿಯುವ ನೀರು ದೊರಕಿತ್ತು. ನದಿ ಜೋಡಣೆಯಾದರೆ ಶಿರಸಿ ನಗರಕ್ಕೆ ವರ್ಷಪೂರ್ತಿ ನೀರಿನ ಅಭಾವ ಎದುರಾಗುವ ಸಾಧ್ಯತೆ ಪ್ರಬಲವಾಗಿದೆ.
 
*2. 'ಸಿಹಿನೀರು' ಮಾಯವಾಗಿ 'ಉಪ್ಪುನೀರು' ಆಕ್ರಮಣ*
 
ಕರಾವಳಿ ಭಾಗದ ನದಿಗಳಲ್ಲಿ ಸಿಹಿನೀರಿನ ಹರಿವು ನಿರಂತರವಾಗಿದ್ದರೆ ಮಾತ್ರ ಸಮುದ್ರದ ಉಪ್ಪುನೀರು ಒಳನುಗ್ಗುವುದನ್ನು ತಡೆಯಬಹುದು. ನದಿ ಹರಿವು ಕಡಿಮೆಯಾದ ಕೂಡಲೇ ಸಮುದ್ರದ ಉಪ್ಪುನೀರು ನದಿಯ ಮೂಲಕ ಹತ್ತಾರು ಕಿಲೋಮೀಟರ್ ಒಳನಾಡಿಗೆ ನುಗ್ಗುತ್ತದೆ.
 
ಇದರಿಂದ ಕುಮಟಾ ಮತ್ತು ಹೊನ್ನಾವರದ ಗ್ರಾಮೀಣ ಭಾಗದ ಜನರ ಬಾವಿ ನೀರು ಶಾಶ್ವತವಾಗಿ ಉಪ್ಪಾಗುತ್ತದೆ. ಒಮ್ಮೆ ಬಾವಿ ನೀರು ಕೆಟ್ಟರೆ, ಕುಡಿಯಲು ಯೋಗ್ಯವಾದ ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ಅಲೆಯಬೇಕಾದ ಸ್ಥಿತಿ ಬರುತ್ತದೆ. ಮಣ್ಣಿನಲ್ಲಿ ಉಪ್ಪಿನಂಶ ಹೆಚ್ಚಾದಂತೆ ಅಂತರ್ಜಲ ಮಲಿನಗೊಂಡು, ಮುಂದಿನ ಅನೇಕ ದಶಕಗಳ ಕಾಲ ಕುಡಿಯಲು ಸಿಹಿನೀರು ಲಭ್ಯವಾಗದಂತಾಗುತ್ತದೆ. ಇದು ಹಿಂತಿರುಗಿಸಲು ಸಾಧ್ಯವಿಲ್ಲದ ಪರಿಸರ ವಿಪತ್ತು.
 
*3. 'ಮಿಕ್ಕ ನೀರು' ಎಂಬ ತಪ್ಪು ಕಲ್ಪನೆ*
ಸರ್ಕಾರವು "ನದಿಯಲ್ಲಿ ನೀರು ಹೆಚ್ಚುವರಿಯಾಗಿದೆ" ಎಂಬ ವಾದ ಮುಂದಿಡುತ್ತಿದೆ. ಆದರೆ ವಾಸ್ತವವೆಂದರೆ ಅಘನಾಶಿನಿ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತದೆ. ಬೇಸಿಗೆಯಲ್ಲಿ ಇಲ್ಲಿ ಹರಿಯುವ ಪ್ರತಿಯೊಂದು ಹನಿ ನೀರು ಕೂಡ ಸ್ಥಳೀಯ ಕುಡಿಯುವ ಉದ್ದೇಶಕ್ಕೆ ಮತ್ತು ಪರಿಸರಕ್ಕೆ ಅತ್ಯಗತ್ಯ.
 
ಅಣೆಕಟ್ಟು ಇಲ್ಲದ ಈ ನದಿಯಲ್ಲಿ 'ಹೆಚ್ಚುವರಿ ನೀರು' ಎನ್ನುವುದೇ ಇಲ್ಲ. ಹರಿಯುವ ನೀರು ಸಮುದ್ರ ಸೇರುವುದು ನಿಸರ್ಗದ ನಿಯಮ, ಅದು ವ್ಯರ್ಥವಲ್ಲ. ಆ ಹರಿವು ನಿಂತರೆ ಕರಾವಳಿಯ ಜಲಚಕ್ರವೇ ನಾಶವಾಗುತ್ತದೆ.
 
*4. ಪ್ರವಾಹ ಮತ್ತು ಬರಗಾಲದ ದ್ವಂದ್ವ ಸಂಕಷ್ಟ*
ನದಿ ತಿರುಗಿಸುವಿಕೆಯು ನೈಸರ್ಗಿಕ ಹರಿವಿನ ಹಾದಿಯನ್ನು ಬದಲಿಸುತ್ತದೆ. ಮಳೆಗಾಲದಲ್ಲಿ ಅನಿರೀಕ್ಷಿತ ಪ್ರವಾಹ ಉಂಟಾಗಿ ಮೇಲ್ಭಾಗದ ಶಿರಸಿ-ಸಿದ್ದಾಪುರ ಜನವಸತಿ ಪ್ರದೇಶಗಳಿಗೆ ತೊಂದರೆಯಾಗುತ್ತದೆ. ಬೇಸಿಗೆಯಲ್ಲಿ ಕರಾವಳಿ ಭಾಗದಲ್ಲಿ ಕುಮಟಾ-ಹೊನ್ನಾವರದಲ್ಲಿ ಕೃತಕ ಬರಗಾಲ ನಿರ್ಮಾಣವಾಗುತ್ತದೆ.
 
*ಮೌನ ಎಂದರೆ ಒಪ್ಪಿಗೆ ಅಲ್ಲ*
 
 ಒಳನಾಡು–ಕರಾವಳಿ ನಡುವೆ ನೀರಿನ ಸಂಘರ್ಷ ಉಂಟಾಗಬಾರದೆಂದು ಸರ್ಕಾರ ಸ್ಪಷ್ಟವಾಗಿ ಮಾತನಾಡುವುದನ್ನು ತಪ್ಪಿಸುತ್ತಿದೆ ? ಆರೋಪಗಳು ಕೇಳಿಬರುತ್ತಿವೆ.
 
*ಇದು ಮೂಲಭೂತ ಹಕ್ಕಿನ ಪ್ರಶ್ನೆ*
 
ಕುಡಿಯುವ ನೀರು ಮನುಷ್ಯನ ಮೂಲಭೂತ ಹಕ್ಕು. ರಾಜಕೀಯ ಲಾಭಕ್ಕಾಗಿ ಅಥವಾ ಒಳನಾಡಿನ ಅಭಿವೃದ್ಧಿಯ ಹೆಸರಿನಲ್ಲಿ ಕರಾವಳಿಯ ಜನರ ಬಾಯಾರಿಕೆಯನ್ನು ಬಲಿಕೊಡುವುದು ಅವೈಜ್ಞಾನಿಕ ಮತ್ತು ಅಮಾನವೀಯ. ಮರಾಕಲ್ ಮತ್ತು ಮಾರಿಗದ್ದೆಯ ಇಂದಿನ ನೀರಿನ ಕೊರತೆಯೇ ಈ ಯೋಜನೆ ಅಪಾಯಕಾರಿ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ಇದು ಅಭಿವೃದ್ಧಿಯ ಯೋಜನೆಯೇ, ಅಥವಾ ಕರಾವಳಿಯ ಜೀವನಾಡಿಯನ್ನು ಅಪಾಯಕ್ಕೆ ಒಡ್ಡುವ ಪ್ರಯೋಗವೇ ?

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0