ಕಾರವಾರದಲ್ಲಿ ಭಾರತೀಯ ನೌಕಾಪಡೆಗೆ ಮತ್ತೊಂದು ಬಲಿಷ್ಠ ಶಕ್ತಿ ಸೇರ್ಪಡೆ: ಸಬ್ಮರಿನ್ ಹಂಟರ್ 'INS ಮಾಲ್ವಾಣ್' ಲೋಕಾರ್ಪಣೆ
ಆಪ್ತ ನ್ಯೂಸ್ ಕಾರವಾರ:
ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸುವ ಮಹತ್ವದ ಬೆಳವಣಿಗೆಯಾಗಿ, ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಸಬ್ಮರಿನ್ ಹಂಟರ್ ಯುದ್ಧನೌಕೆ 'INS ಮಾಲ್ವಾಣ್' ಅನ್ನು ಕಾರವಾರದ INS ಕದಂಬ ನೌಕಾನೆಲೆಯಲ್ಲಿ ಹಿರಿಯ ನೌಕಾಪಡೆ ಅಧಿಕಾರಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಗಿದೆ.
ಸಮುದ್ರದಾಳದಲ್ಲಿ ಶತ್ರು ರಾಷ್ಟ್ರಗಳ ಜಲಾಂತರ್ಗಾಮಿ (Submarine) ಚಟುವಟಿಕೆಗಳನ್ನು ಪತ್ತೆಹಚ್ಚಿ, ಅವುಗಳನ್ನು ನಾಶಪಡಿಸುವ ಅತ್ಯಾಧುನಿಕ ಸಾಮರ್ಥ್ಯ ಹೊಂದಿರುವ ಈ ಯುದ್ಧನೌಕೆ ಭಾರತೀಯ ನೌಕಾಪಡೆಯ ಸಾಗರ ಭದ್ರತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ. ದೇಶೀಯ ತಂತ್ರಜ್ಞಾನಕ್ಕೆ ಮತ್ತೊಂದು ಹೆಮ್ಮೆಯ ಸಂಕೇತವಾಗಿರುವ ಈ ನೌಕೆಯನ್ನು ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ ನಿರ್ಮಿಸಿದೆ.
ಅತ್ಯಾಧುನಿಕ ತಂತ್ರಜ್ಞಾನದ ಶಕ್ತಿ
ಸುಮಾರು 80 ಮೀಟರ್ ಉದ್ದ ಹಾಗೂ 1,100 ಟನ್ ಸ್ಥಳಾಂತರ ಸಾಮರ್ಥ್ಯ ಹೊಂದಿರುವ INS ಮಾಲ್ವಾಣ್ ಅತ್ಯಾಧುನಿಕ ಯುದ್ಧೋಪಕರಣಗಳಿಂದ ಸಜ್ಜುಗೊಂಡಿದೆ. ಇದರಲ್ಲಿ ಶತ್ರು ಜಲಾಂತರ್ಗಾಮಿಗಳನ್ನು ಗುರುತಿಸಿ ದಾಳಿ ನಡೆಸಲು ಆ್ಯಂಟಿ ಸಬ್ಮರಿನ್ ರಾಕೆಟ್ಗಳು, ಅತ್ಯಾಧುನಿಕ ರಾಡಾರ್ ಹಾಗೂ ಸೋನಾರ್ ವ್ಯವಸ್ಥೆಗಳು ಅಳವಡಿಸಲಾಗಿದ್ದು, ಆಳ ಸಮುದ್ರದಲ್ಲಿಯೂ ನಿಖರ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.
ವಿಶೇಷವಾಗಿ ಭಾರತೀಯ ಕರಾವಳಿ ಭದ್ರತೆ, ಸಮುದ್ರ ಗಸ್ತು, ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆ ಹಾಗೂ ತುರ್ತು ಸೇನಾ ಕಾರ್ಯಾಚರಣೆಗಳಲ್ಲಿ ಈ ಯುದ್ಧನೌಕೆ ಮಹತ್ವದ ಪಾತ್ರವಹಿಸಲಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.
'ಮಾಲ್ವಾಣ್' ಹೆಸರಿನ ಹಿಂದೆ ಇತಿಹಾಸದ ಗೌರವ
ಈ ಯುದ್ಧನೌಕೆಗೆ 'ಮಾಲ್ವಾಣ್' ಎಂದು ಹೆಸರಿಡುವುದರ ಹಿಂದೆಯೂ ಐತಿಹಾಸಿಕ ಹಿನ್ನೆಲೆ ಇದೆ. ಛತ್ರಪತಿ ಶಿವಾಜಿ ಮಹಾರಾಜರು ಕರಾವಳಿ ರಕ್ಷಣೆಯನ್ನು ಬಲಪಡಿಸಲು ಹಾಗೂ ವಿದೇಶಿ ವ್ಯಾಪಾರಿಗಳ ಚಟುವಟಿಕೆಗಳನ್ನು ನಿಯಂತ್ರಿಸಲು ನಿರ್ಮಿಸಿದ್ದ ಐತಿಹಾಸಿಕ 'ಸಿಂಧುದುರ್ಗ' ಕೋಟೆ ಮಹಾರಾಷ್ಟ್ರದ ಮಾಲ್ವಾಣ್ ಪಟ್ಟಣದಲ್ಲಿದೆ.
ಶಿವಾಜಿ ಮಹಾರಾಜರ ಸಮುದ್ರ ಭದ್ರತೆಯ ದೂರದೃಷ್ಟಿಗೆ ಗೌರವ ಸೂಚಿಸುವ ಉದ್ದೇಶದಿಂದಲೇ ಭಾರತೀಯ ನೌಕಾಪಡೆ ಈ ಆಧುನಿಕ ಯುದ್ಧನೌಕೆಗೆ 'INS ಮಾಲ್ವಾಣ್' ಎಂದು ನಾಮಕರಣ ಮಾಡಿದೆ.
'ಬಾಘ್ ನಖ್' ಲಾಂಛನದ ವಿಶೇಷತೆ
INS ಮಾಲ್ವಾಣ್ನ ಮತ್ತೊಂದು ವಿಶೇಷ ಆಕರ್ಷಣೆ ಅದರ ಲಾಂಛನವಾಗಿದೆ. ಶಿವಾಜಿ ಮಹಾರಾಜರ ಪ್ರಸಿದ್ಧ ಆಯುಧವಾದ 'ಬಾಘ್ ನಖ್' (ಹುಲಿಯ ಉಗುರು) ಅನ್ನು ಈ ಯುದ್ಧನೌಕೆಯ ಅಧಿಕೃತ ಲಾಂಛನವಾಗಿ ಅಳವಡಿಸಲಾಗಿದೆ. ಇದು ಶೌರ್ಯ, ಚಾಣಾಕ್ಷತನ ಮತ್ತು ಶತ್ರುಗಳ ವಿರುದ್ಧದ ಪ್ರಬಲ ಪ್ರತಿರೋಧದ ಸಂಕೇತವಾಗಿದೆ.
ಸ್ವಾವಲಂಬಿ ಭಾರತದ ಮತ್ತೊಂದು ಹೆಜ್ಜೆ
'ಆತ್ಮನಿರ್ಭರ ಭಾರತ' ಪರಿಕಲ್ಪನೆಗೆ ಬಲ ತುಂಬುವ ಈ ಸ್ವದೇಶಿ ನಿರ್ಮಿತ ಯುದ್ಧನೌಕೆ ಭಾರತೀಯ ನೌಕಾಪಡೆಯ ಆಧುನೀಕರಣಕ್ಕೆ ಮತ್ತೊಂದು ಮೈಲಿಗಲ್ಲಾಗಿದ್ದು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಸಾಗರ ಭದ್ರತೆ ಮತ್ತು ಕಾರ್ಯಾಚರಣಾ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆ ಇದೆ.
INS ಕದಂಬ ನೌಕಾನೆಲೆಯಲ್ಲಿ ನಡೆದ ಲೋಕಾರ್ಪಣೆ ಸಮಾರಂಭದಲ್ಲಿ ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಗಳು, ರಕ್ಷಣಾ ವಲಯದ ಗಣ್ಯರು ಹಾಗೂ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನ ಪ್ರತಿನಿಧಿಗಳು ಉಪಸ್ಥಿತರಿದ್ದರು. ಹೊಸ ಯುದ್ಧನೌಕೆಯ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿರೋಧಿ ಸಾಮರ್ಥ್ಯ ಮತ್ತಷ್ಟು ಬಲಿಷ್ಠಗೊಂಡಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



