ಕಾಲುವೆಗಿಳಿದ ಕೆಎಸ್ಆರ್ಟಿಸಿ ಬಸ್; ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ
ಆಪ್ತ ನ್ಯೂಸ್ ಯಲ್ಲಾಪುರ:
ತಾಲೂಕಿನ ವಜ್ರಳ್ಳಿ ಸಮೀಪದ ಹೊನ್ನಗದ್ದೆ ಶಾಲೆಯ ಬಳಿ ಮಂಗಳವಾರ ಬೆಳಗ್ಗೆ ಕೆಎಸ್ಆರ್ಟಿಸಿ ಬಸ್ವೊಂದು ರಸ್ತೆ ಬದಿಯ ಕಾಲುವೆಗೆ ಇಳಿದಿದ್ದು, ಅದೃಷ್ಟವಶಾತ್ ಬಸ್ನಲ್ಲಿದ್ದ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಬಾಸಲ್ನಿಂದ ಯಲ್ಲಾಪುರ ಮಾರ್ಗವಾಗಿ ಹೊನ್ನಗದ್ದೆಗೆ ತೆರಳುತ್ತಿದ್ದ ಬಸ್ ಹೊನ್ನಗದ್ದೆ ಶಾಲೆಯ ಸಮೀಪದಲ್ಲಿ ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿಯ ಕಾಲುವೆಗೆ ಇಳಿದಿದೆ. ಬಸ್ನಲ್ಲಿ ಸ್ಥಳೀಯ ಪ್ರಯಾಣಿಕರ ಜೊತೆಗೆ ಶಾಲಾ ಮಕ್ಕಳೂ ಇದ್ದರು. ಆದರೆ ಘಟನೆಯಲ್ಲಿ ಯಾವುದೇ ಗಂಭೀರ ಗಾಯ ಸಂಭವಿಸಿಲ್ಲ ಎನ್ನಲಾಗಿದೆ.
ರಸ್ತೆ ಬದಿಯ ಕಾಲುವೆಯನ್ನು ಸ್ಥಳೀಯ ಬಿಎಸ್ಎನ್ಎಲ್ ಕೇಬಲ್ ಅಳವಡಿಕೆಗಾಗಿ ಬಳಸಿರುವುದೇ ಘಟನೆಗೆ ಕಾರಣವಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈಗಾಗಲೇ ಇಕ್ಕಟ್ಟಾಗಿರುವ ರಸ್ತೆಯಲ್ಲಿ ರಸ್ತೆ ಬದಿಯ ಗಿಡ-ಗಂಟಿಗಳು ಬೆಳೆದು ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಿದ್ದು, ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ರಸ್ತೆಯ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. ಕೂಡಲೇ ಲೋಕೋಪಯೋಗಿ ಇಲಾಖೆ ರಸ್ತೆಯಂಚಿನ ಗಿಡ-ಗಂಟಿಗಳನ್ನು ತೆರವುಗೊಳಿಸಿ, ರಸ್ತೆ ಹಾಗೂ ಕಾಲುವೆ ಪ್ರದೇಶವನ್ನು ಪರಿಶೀಲಿಸಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



