ಆಪ್ತ ನ್ಯೂಸ್ ಬೆಂಗಳೂರು:
ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯನ್ನು ಹವ್ಯಕ ಮಹಾಸಭೆಯು ವಿರೋಧಿಸಿದೆ. ಅಲ್ಲದೇ ಈ ಯೋಜನೆ ವಿರೋಧಿಸಿ ಸ್ವರ್ಣವಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಜನವರಿ ೧೧ರಂದು ಶಿರಸಿಯಲ್ಲಿ ನಡೆಯುತ್ತಿರುವ ಜನಸಮಾವೇಶಕ್ಕೆ ಹವ್ಯಕ ಮಹಾಸಭೆ ಬೆಂಬಲ ಸೂಚಿಸಿದೆ.
ನದಿಗಳು ಜನಸಮೂಹದ ಜೀವನಾಡಿಗಳಾಗಿದ್ದು, ನದಿಗಳ ನೈಸರ್ಗಿಕ ಹರಿವಿನ ಬದಲಾವಣೆಯು ಜೀವಸಂಕುಲಕ್ಕೆ ಅಪಾಯಕಾರಿಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾದರೆ ದೀರ್ಘಕಾಲದ ಸಾಧಕ - ಬಾಧಕಗಳನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಬೇಕು ಹಾಗೂ ಸಮಗ್ರ ವೈಜ್ಞಾನಿಕ ಚಿಂತನೆ ಇಲ್ಲದ ಅಭಿವೃದ್ಧಿಯು ಭವಿಷ್ಯದಲ್ಲಿ ಜೀವ ಸಂಕುಲಕ್ಕೆ ಮಾರಕವಾಗಲಿದೆ. ಈ ಹಿನ್ನೆಲೆಯಲ್ಲಿ ಬೇಡ್ತಿ ಹಾಗೂ ಅಘನಾಶಿನಿ ನದಿಗಳ ತಿರುವಿನ ಯೋಜನೆಯಿಂದ ಸರ್ಕಾರಗಳು ತಕ್ಷಣ ಹಿಂದೆ ಸರಿಯಬೇಕು ಎಂದು ಅಖಿಲ ಹವ್ಯಕ ಮಹಾಸಭೆ ಆಗ್ರಹಿಸಿದೆ.
ಬೇಡ್ತಿ - ಅಘನಾಶಿನಿ ಹಾಗೂ ಶರಾವತಿ ನದಿಗಳು ಉತ್ತರಕನ್ನಡದ ಜೀವ ನದಿಗಳಾಗಿದ್ದು, ನಾಡಿನ ಅಭಿವೃದ್ಧಿಗಾಗಿ ಉತ್ತರ ಕನ್ನಡವು ಈಗಾಗಲೇ ಹಲವಾರು ತ್ಯಾಗಗಳನ್ನು ಮಾಡಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶವಾದ ಉತ್ತರ ಕನ್ನಡದ ಮೇಲೆ ಇನ್ನಷ್ಟು ಹೇರಿಕೆ ಮಾಡುವುದು ಜನಜೀವನ ಹಾಗೂ ಪ್ರಾಕೃತಿಕ ಸಂಪತ್ತಿನ ಮೇಲಿನ ದೌರ್ಜನ್ಯವಾಗಿದೆ. ಬಹು ಕೋಟಿ ವೆಚ್ಚದಲ್ಲಿ ನಡೆದ ಎತ್ತಿನ ಹೊಳೆ ಯೋಜನೆಯು ಬಹುತೇಕ ನಿಷ್ಪ್ರಯೋಜಕವಾಗಿರುವ ಉದಾಹರಣೆ ನಮ್ಮ ಕಣ್ಣಿನ ಮುಂದೆ ಇರುವಾಗ, ಇದೀಗ ಪರಿಸರಕ್ಕೆ ಮಾರಕವಾದ ಮತ್ತೊಂದು ಯೋಜನೆಯನ್ನು ಮಾಡಲು ಹೊರಟಿರುವುದು ಪರಿಸರ - ಜನಜೀವನ - ಆರ್ಥಿಕ - ಭವಿಷ್ಯ ಮುಂತಾದ ಎಲ್ಲಾ ದೃಷ್ಟಿಯಿಂದಲೂ ಅವೈಜ್ಞಾನಿಕವಾಗಿದೆ.
ಕಷ್ಟ ಜೀವಿಗಳಾದ ಉತ್ತರ ಕನ್ನಡದ ಜನರು ಪರಿಸರದ ಜೊತೆಜೊತೆಗೆ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದು, ಹವ್ಯಕ ಸಮಾಜದ ಬಂಧುಗಳು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಜನಜೀವನಕ್ಕೆ ವರ್ತಮಾನ ಹಾಗೂ ಭವಿಷ್ಯದಲ್ಲಿ ಮಾರಕವಾಗುವ ಮತ್ತು ಸೂಕ್ಷ್ಮ ಪರಿಸರಕ್ಕೆ ಹಾನಿಯನ್ನುಂಟುಮಾಡುವ ನದಿ ತಿರುವಿನ ಯೋಜನೆಯನ್ನು ಮಹಾಸಭೆ ತೀವ್ರವಾಗಿ ಖಂಡಿಸುತ್ತದೆ.
ಬೇಡ್ತಿ - ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಯೋಜನೆಯಲ್ಲಿ ಹಾಗೂ ನಾಡಿನ ವಿವಿಧ ಸಂತರ ನೇತೃತ್ವ ಹಾಗೂ ಬೆಂಬಲದೊಂದಿಗೆ ಜನವರಿ 11 ರಂದು ಶಿರಸಿಯಲ್ಲಿ ನಡೆಯಲಿರುವ ಬೃಹತ್ ಜನ ಸಮಾವೇಶವನ್ನು ಹವ್ಯಕ ಮಹಾಸಭೆಯು ಬೆಂಬಲಿಸುತ್ತದೆ ಹಾಗೂ ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಜನ ವಿರೋಧಿ ಯೋಜನೆಗೆ ನಮ್ಮ ವಿರೋಧವನ್ನು ದಾಖಲಿಸಬೇಕಾಗಿ ಆಗ್ರಹಿಸಿತ್ತದೆ. ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ಈ ಯೋಜನೆಗಳಿಂದ ಹಿಂದೆ ಸರಿಯಬೇಕಾಗಿ ಮಹಾಸಭೆಯು ತೀಕ್ಷ್ಣವಾಗಿ ಆಗ್ರಹಿಸುತ್ತದೆ ಎಂದು ಹವ್ಯಕ ಮಹಾಸಭೆ ಅಧ್ಯಕ್ಷ ಗಿರಿಧರ ಕಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.