ಉತ್ತರ ಕನ್ನಡದಲ್ಲಿ ಜೂನ್ 6ರಿಂದ ಭಾರಿ ಮಳೆಯ ಎಚ್ಚರಿಕೆ: ಜಿಲ್ಲಾಡಳಿತ ಹೈ ಅಲರ್ಟ್, 294 ಕಾಳಜಿ ಕೇಂದ್ರಗಳ ಸಿದ್ಧತೆ
ಆಪ್ತ ನ್ಯೂಸ್ ಕಾರವಾರ:
ಮುಂಗಾರು ಉತ್ತರ ಕನ್ನಡ ಜಿಲ್ಲೆಗೆ ಅಬ್ಬರದೊಂದಿಗೆ ಪ್ರವೇಶಿಸುವ ಸಾಧ್ಯತೆ ಕಂಡುಬಂದಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜೂನ್ 6ರಿಂದ ಜೂನ್ 10ರವರೆಗೆ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಂಪೂರ್ಣ ಸಜ್ಜಾಗಿದ್ದು, ಸಾರ್ವಜನಿಕರ ಸುರಕ್ಷತೆಗೆ ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಜೂನ್ 5ರಂದು ಮಧ್ಯಮ ಪ್ರಮಾಣದ ಮಳೆಯಾಗಲಿದ್ದು, ಬಳಿಕ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಭಾರೀ ಮಳೆಯ ಪರಿಣಾಮವಾಗಿ ಪ್ರವಾಹ, ಭೂಕುಸಿತ ಹಾಗೂ ರಸ್ತೆ ಸಂಪರ್ಕ ವ್ಯತ್ಯಯದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಯನ್ನು ಮನಗಂಡು ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.
294 ಕಾಳಜಿ ಕೇಂದ್ರಗಳ ಸಿದ್ಧತೆ
ಮಳೆ ಹಾನಿಯಿಂದ ಸಂಕಷ್ಟಕ್ಕೀಡಾಗುವ ಜನರ ಸುರಕ್ಷತೆಗಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 294 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಕೇಂದ್ರಗಳ ನಿರ್ವಹಣೆಗೆ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅಗತ್ಯ ಸೌಲಭ್ಯಗಳೊಂದಿಗೆ ಸನ್ನದ್ಧವಾಗಿರಲು ಸೂಚನೆ ನೀಡಲಾಗಿದೆ.
439 ಭೂಕುಸಿತ ಅಪಾಯದ ಸ್ಥಳಗಳ ಮೇಲೆ ನಿಗಾ
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ ವರದಿ ಆಧರಿಸಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ 439 ಭೂಕುಸಿತ ಸಂಭವನೀಯ ಸ್ಥಳಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಲು ವಿಶೇಷ ಸ್ಪಾಟರ್ಸ್ಗಳನ್ನು ನೇಮಿಸಲಾಗಿದ್ದು, ಅವರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುತ್ತಿದೆ. ಅಪಾಯದ ಸೂಚನೆ ಕಂಡುಬಂದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವ ವ್ಯವಸ್ಥೆ ಜಾರಿಯಲ್ಲಿದೆ.
ಚರಂಡಿ ಸ್ವಚ್ಛತೆ ಪೂರ್ಣ, ಮುಂದಿನ ಹಂತಕ್ಕೆ ಸಿದ್ಧತೆ
ಮಳೆಗಾಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸ್ಥಳೀಯ ಸಂಸ್ಥೆಗಳ ಮೂಲಕ ಪ್ರಮುಖ ಚರಂಡಿಗಳ ಸ್ವಚ್ಛತಾ ಕಾರ್ಯದ ಮೊದಲ ಹಂತವನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆಯನ್ನು ಗಮನಿಸಿ ಅಗತ್ಯವಿದ್ದರೆ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರಗಳ ಸುರಕ್ಷತೆಗೆ ಆದ್ಯತೆ
ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳು, ಅಂಗನವಾಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ವಿದ್ಯಾರ್ಥಿನಿಲಯಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಟ್ಟಡಗಳ ಸ್ಥಿತಿ, ವಿದ್ಯುತ್ ಸಂಪರ್ಕ ಹಾಗೂ ಅಗತ್ಯ ಸೌಲಭ್ಯಗಳ ಪರಿಶೀಲನೆಗೆ ಆದ್ಯತೆ ನೀಡಲಾಗಿದೆ.
ಹೆಸ್ಕಾಂ ಮತ್ತು ಬಿಎಸ್ಎನ್ಎಲ್ ಸನ್ನದ್ಧ
ಭಾರಿ ಮಳೆಯ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ಸಂಪರ್ಕ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಹೆಸ್ಕಾಂ ಮತ್ತು ಬಿಎಸ್ಎನ್ಎಲ್ ಸಂಸ್ಥೆಗಳು ಕೂಡ ಅಗತ್ಯ ಬದಲಿ ಸಾಮಗ್ರಿಗಳೊಂದಿಗೆ ಸಂಪೂರ್ಣ ಸಜ್ಜಾಗಿವೆ. ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸೇವೆ ಪುನಃಸ್ಥಾಪಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳ ಮನವಿ
ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ನದಿಗಳು, ಹಳ್ಳಗಳು ಹಾಗೂ ಗುಡ್ಡ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸಬೇಕು. ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆ ನೀಡುವ ಮುನ್ಸೂಚನೆಗಳನ್ನು ನಿಯಮಿತವಾಗಿ ಗಮನಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ತುರ್ತು ಸಹಾಯವಾಣಿ ಸಂಖ್ಯೆಗಳು
ಯಾವುದೇ ತುರ್ತು ಪರಿಸ್ಥಿತಿ ಎದುರಾದಲ್ಲಿ ಸಾರ್ವಜನಿಕರು ಕೆಳಗಿನ ಸಂಖ್ಯೆಗಳ ಮೂಲಕ ನೆರವು ಪಡೆಯಬಹುದು:
ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿ
-
ಜಿಲ್ಲಾಧಿಕಾರಿಗಳ ನಿಯಂತ್ರಣ ಕೊಠಡಿ: 08382-229857
-
ಮೊಬೈಲ್: 9483511015
ಪೊಲೀಸ್ ನಿಯಂತ್ರಣ ಕೊಠಡಿ
-
ದೂರವಾಣಿ: 08382-226550
-
ಮೊಬೈಲ್: 9480805200
ತಾಲೂಕು ಮಟ್ಟದ ನಿಯಂತ್ರಣ ಕೊಠಡಿಗಳು
-
ಕಾರವಾರ – 08382-223350
-
ಅಂಕೋಲಾ – 08388-230243
-
ಕುಮಟಾ – 08386-222054
-
ಹೊನ್ನಾವರ – 08387-220262
-
ಭಟ್ಕಳ – 08385-226422
-
ಶಿರಸಿ – 9448769569
-
ಸಿದ್ದಾಪುರ – 08389-230127
-
ಯಲ್ಲಾಪುರ – 9902571927
-
ಮುಂಡಗೋಡ – 08301-222122
-
ಹಳಿಯಾಳ – 08284-220134
-
ಜೋಯಿಡಾ – 8310703169
-
ದಾಂಡೇಲಿ – 08284-295959
ಎಚ್ಚರಿಕೆಯಿಂದಿರಿ, ಸುರಕ್ಷಿತವಾಗಿರಿ
ಜೂನ್ 6ರಿಂದ ಭಾರಿ ಮಳೆಯ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ತಗ್ಗು ಪ್ರದೇಶದ ನಿವಾಸಿಗಳು, ಗುಡ್ಡ ಪ್ರದೇಶಗಳಲ್ಲಿ ವಾಸಿಸುವವರು ಹಾಗೂ ನದಿ ತೀರದ ಜನರು ವಿಶೇಷ ಎಚ್ಚರಿಕೆ ವಹಿಸಬೇಕು. ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವ ಮೂಲಕ ಸಂಭವನೀಯ ಅನಾಹುತಗಳಿಂದ ಸುರಕ್ಷಿತವಾಗಿರಬಹುದು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



