ಆಪ್ತ ನ್ಯೂಸ್ ಶಿರಸಿ:
ರಾಜ್ಯದಲ್ಲಿಯೇ ಅತಿ ದೊಡ್ಡ ಶಿರಸಿ ಮಾರಿಕಾಂಬಾ ಜಾತ್ರೆಗೆ ಇನ್ನೂ ಜಾತ್ರಾ ಅನುದಾನ ಮಂಜೂರಿಯಾಗಿಲ್ಲ, ಈಗಾಗಲೇ ಪತ್ರಿಕಾಗೋಷ್ಠಿ ನಡೆಸಿ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿದರೂ, ಕೂಡ ಶಾಸಕರು ನಿರ್ಲಕ್ಷ್ಯ ತೋರಿದ್ದಾರೆ. ಮೂಲಭೂತ ಸೌಕರ್ಯ ಅಂದರೆ ಕೇವಲ ರಸ್ತೆಯಲ್ಲ, ಬರುವ ಲಕ್ಷಾಂತರ ಭಕ್ತರಿಗೆ ಶೌಚಾಲಯ, ಸ್ನಾನಗೃಹ, ರಾತ್ರಿ ಮಲಗುವ ವ್ಯವಸ್ಥೆ, ಬೆಳಿಗ್ಗೆ ತಿಂಡಿ ವ್ಯವಸ್ಥೆ ಒಳಗೊಂಡಿದೆ. ಕನಿಷ್ಠ ಪಕ್ಷ ೧೦ ಸಾವಿರ ಜನಕ್ಕೆ ಮಾಡಲೇ ಬೇಕು, ಕುಂಭಮೇಳದ ಮಾದರಿಯಲ್ಲಿ ಭಕ್ತರಿಗೆ ವ್ಯವಸ್ಥೆ ಮಾಡಲೇ ಬೇಕು ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾತ್ರೆಗೆ ಸಂಬಂಧಿಸಿ, ಶಿರಸಿಯ ಎಲ್ಲ ಕಲ್ಯಾಣ ಮಂಟಪ ಬಾಡಿಗೆಗೆ ಪಡೆದು ಸರಕಾರವೇ ಅದರ ಹಣ ಪಾವತಿಸಿ ಧರ್ಮಛತ್ರವಾಗಿ ಪರಿವರ್ತಿಸಬೇಕು , ಬೆಳಿಗ್ಗೆ ಸ್ನಾನಕ್ಕೆ ಜನ ಕೋಟೆಕೆರೆಗೆ ಹೋಗುತ್ತಾರೆ , ಕಾಲು ಜಾರಿ ಸತ್ತರೆ ಯಾರು ಜವಾಬ್ದಾರಿ ? ಪೋಸ್ಟ್ ಆಫೀಸ್ ಪಕ್ಕ ಮಾರಿಕಾಂಬಾ ಗದ್ದುಗೆ ಹತ್ತಿರ ಇರುವ ಶೌಚಾಲಯದ ಸ್ವಚ್ಛತೆ ಮಾಡಲಾಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಇತ್ತಿಚಿಗೆ ಸಿದ್ದಾಪುರದ ಕಾರ್ಯಕ್ರಮವೊಂದರಲ್ಲಿ, ಶಾಸಕ ಭೀಮಣ್ಣ ಸಚಿವ ಮಂಕಾಳರ ವಿರುದ್ಧ ಮಾತನಾಡಿದ್ದು ಎಲ್ಲರಿಗೂ ತಿಳಿದಿದೆ. ಬಡವರಿಗೆ ಹಣ ಕೊಡದೆ ಸ್ವಾರ್ಥಕ್ಕೆ ಕರಾವಳಿ ಉತ್ಸವ ಮಾಡುತ್ತಿದ್ದೀರಾ, ೫೦ ಕೋಟಿ ಕ್ರಿಯಾ ಯೋಜನೆ ಮಾಡಿ ಕಳಿಸಿದರೆ ನಯಾಪೈಸೆ ಹಣ ಬಿಡುಗಡೆ ಮಾಡುತ್ತಿಲ್ಲ, ನನ್ನನ್ನ ಕರಾವಳಿ ಉತ್ಸವಕ್ಕೆ ಕರೆಯದೆ ಅವಮಾನ ಮಾಡಿದ್ದಾರೆ ಎಂದು ಸಿದ್ದಾಪುರದಲ್ಲಿ ಸಚಿವ ಮಂಕಾಳರ ವಿರುದ್ಧ ಸ್ವತಃ ಭೀಮಣ್ಣ ಅಳಲನ್ನು ತೋಡಿಕೊಂಡಿದ್ದರು. ಒಬ್ಬ ಜನರಿಂದ ಆಯ್ಕೆಯಾದ ಶಾಸಕನನ್ನು ಇಷ್ಟೊಂದು ತುಚ್ಛವಾಗಿ ನಡೆಸಿಕೊಳ್ಳಬಾರದು. ಈ ಸರಕಾರದಲ್ಲಿ ತಾರತಮ್ಯ ಮಾಡಲಾಗುತ್ತದೆ, ಕರಾವಳಿ ಉತ್ಸವಕ್ಕೆ ಹಣ ಕೊಡುತ್ತೀರಿ , ಶಿರಸಿ ಜಾತ್ರೆಗೆ ಭಕ್ತರ ಮೂಲಭೂತ ಸೌಕರ್ಯಕ್ಕೆ ಯಾಕೆ ಹಣ ಇಲ್ಲ ? ನಮಗೆ ಮರ್ಯಾದೆ ಇಲ್ಲವೇ ? ಇದು ನಮ್ಮ ಸ್ವಾಭಿಮಾನದ ವಿಷಯವಾಗಿದೆ. ಜಾತ್ರೆಯ ಒಳಗೆ ಈ ಸಲದ ಜಾತ್ರಾ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಶಾಸಕ ಭೀಮಣ್ಣ ಜನರ ಸ್ವಾಭಿಮಾನ ಎತ್ತಿ ಹಿಡಿಯುವ ಕಾರ್ಯ ಮಾಡಬೇಕು, ಮಂಕಾಳ ವೈದ್ಯರಿಗೆ ನಿಮ್ಮ ತಾಕತ್ತನ್ನು ತೋರಿಸಬೇಕು, ಒಂದು ವೇಳೆ ಸರ್ಕಾರದಿಂದ ಹಣ ಬಂದಿಲ್ಲ ಎಂದರೆ ಶಾಸಕರೇ ದೇವಸ್ಥಾನ ಆಡಳಿತ ಕಮಿಟಿ ಹತ್ತಿರ ಮಾತನಾಡಿ ಹಣ ಕೊಡಿಸುವ ಕೆಲಸ ಮಾಡಬೇಕು. ಹಿಂದೆಲ್ಲ ಪ್ರತಿ ಜಾತ್ರೆಗೂ ಜಾತ್ರಾ ಅನುದಾನ ಮಾಡಿಸಿ ಎಲ್ಲ ೩೧ ವರ್ಡ್ ಗಳಲ್ಲಿಯೂ ಜಾತ್ರೆಗೆ ಅಗತ್ಯ ಅಭಿವೃದ್ಧಿಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿತ್ತು. ಈಗ ಯಾವುದೋ ಕಾರ್ಯಕ್ಕೆ, ಎಲ್ಲೋ ಬಂದ ಹಣವನ್ನು ಜಾತ್ರಾ ಅನುದಾನ ಎಂದು ಜನರನ್ನು ನಂಬಿಸುವ ಸ್ಥಿತಿ ಬಂದಿದೆ. ಈ ಹಿಂದೆ ಬಂದಿದ್ದ ಹಣವನ್ನಾದರೂ ಇಟ್ಟುಕೊಂಡಿದ್ದರೆ, ಈ ಬಾರಿ ವ್ಯವಸ್ಥೆ ಮಾಡಬಹುದಿತ್ತು. ಭೀಮಣ್ಣ ಈ ಬಾರಿ ಮುಂಚಿತವಾಗಿ ಜಾತ್ರಾ ಅನುದಾನ ಮಂಜೂರಿ ಮಾಡಿಸಿ ತಮ್ಮ ಶಕ್ತಿ, ಇಚ್ಛಾಶಕ್ತಿ ಪ್ರದರ್ಶಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ನಗರಸಭೆ ಆಡಳಿತವೂ ಇಲ್ಲದಿರುವುದರಿಂದ ಈ ವರ್ಷ ಮಾರಿಕಾಂಬಾ ದೇವಿ ಜಾತ್ರೆಯ ಜವಾಬ್ದಾರಿ ಶಾಸಕರ ಮೇಲಿದೆ. ದಿನ ೧ರಿಂದ ೨ ಲಕ್ಷ ಜನ ಸೇರುತ್ತಾರೆ . ಹೀಗಾಗಿ, ಉಂಟಾಗುವ ಗೊಂದಲಗಳನ್ನು ನಿವಾರಿಸುವ ಜವಾಬ್ದಾರಿ ದೊಡ್ಡದಿದೆ. ರಾಜ್ಯದ ಉದ್ದಗಲದಿಂದ, ಅದರಲ್ಲೂ ಕರಾವಳಿ ಕುಂದಾಪುರ ಭಾಗದಿಂದ ಹಾಗು ಉತ್ತರ ಕರ್ನಾಟಕ ಲಂಬಾಣಿ ಗಳು ಇನ್ನು ಹಲವಾರು ಸಮುದಾಯದವರು ಹೆಚ್ಚಾಗಿ ಬರುತ್ತಾರೆ , ಪ್ರತಿ ದಿನ ೫೦ ಸಾವಿರಕ್ಕೂ ಅಧಿಕ ಹೊರ ಜಿಲ್ಲೆಯ ಜನ ಶಿರಸಿಯಲ್ಲೇ ವಾಸ್ತವ್ಯ ಮಾಡುತ್ತಾರೆ. ಇದುವರೆಗೂ ಮಾರಿಕಾಂಬಾ ದೇವಸ್ಥಾನದ ಎದುರಿನ ಅಂಗಳಗಳಲ್ಲಿ, ರಸ್ತೆಯ ಮೇಲೆ ಮಲಗುತ್ತಾರೆ. ಶಾಸಕರು ಜಾತ್ರಾ ಅನುದಾನ ಮಂಜೂರು ಮಾಡಿಸಿದರೆ ಅವ್ಯವಸ್ಥೆಗಳನ್ನು ಸರಿ ಮಾಡಬಹುದಾಗಿದೆ.
ಸಮನ್ವಯತೆ ಸಾಧಿಸಲಿ:
ಪ್ರತಿ ಜಾತ್ರೆಯಲ್ಲೂ ಖರ್ಚು ನಿಭಾವಣೆ ಕುರಿತಂತೆ ನಗರಸಭೆ ಮತ್ತು ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿಯ ಮಧ್ಯೆ ಗೊಂದಲ ಏರ್ಪಡುತ್ತಿದೆ. ಆರೋಪ ಅಸಮಾಧಾನ ಆಗುವುದನ್ನು ತಪ್ಪಿಸಲು ಈ ಸಲ ಭೀಮಣ್ಣ ತಮ್ಮ ಕುಶಲತೆ ಪ್ರದರ್ಶಿಸಲಿ. ಈ ಇಬ್ಬರನ್ನೂ ಒಳಗೊಂಡು ಮುಂಚಿತವಾಗಿ ಸಭೆ ನಡೆಸಲಿ. ಜಾತ್ರಾ ಚಪ್ಪರದ ಸಮೀಪ ಇಕ್ಕಟ್ಟಾಗುವುದನ್ನು ತಪ್ಪಿಸಲು, ಭಕ್ತರ ಸುರಕ್ಷತೆಯ ದೃಷ್ಠಿಯಿಂದ ಯಾವುದೇ ಅಂಗಡಿ ಅಥವಾ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಾರದು. ವಿಐಪಿ ಮತ್ತು ಸಾಮಾನ್ಯ ದರ್ಶನದ ಮಧ್ಯೆ ವ್ಯತ್ಯಾಸವಿಲ್ಲದಂತಾಗಿದೆ. ಹೀಗಾಗಿ, ಈ ಪ್ರವೇಶಗಳಿಗೆ ಪ್ರತ್ಯೇಕ ದ್ವಾರ ಮಾಡುವುದು ಉತ್ತಮ. ಪ್ರತಿ ದಿನ ೧೦ ಗಂಟೆಯಿಂದ ೧ ಗಂಟೆಯವರೆಗೆ ದೇವಸ್ಥಾನದ ವತಿಯಿಂದಲೇ ಪಾನೀಯ ವ್ಯವಸ್ಥೆ ಮಾಡಬೇಕು.
ಜಾತ್ರೆಗೆ ಆಗಮಿಸಿದ ಭಕ್ತರಿಗೆ ರಾತ್ರಿ ತಂಗುವ ವ್ಯವಸ್ಥೆಯಲ್ಲಿ ಸಮಸ್ಯೆ ಆಗುತ್ತಿದೆ. ದೇವಸ್ಥಾನದ ಸುತ್ತಮುತ್ತಲಿನ ಪ್ರಾಂಗಣದಲ್ಲಿಯೇ ನಿದ್ರಿಸುವ ಬಡ ಬಗ್ಗರು ಮಾರನೇ ದಿನ ಶೌಚಕ್ಕಾಗಿ ಖಾಲಿ ಜಾಗ, ಮರೆ ಜಾಗ ಹುಡುಕುತ್ತಾರೆ. ಇದರಿಂದಾಗಿ ಜಾತ್ರೆಯ ವೇಳೆ ನೈರ್ಮಲ್ಯ ಕೆಡುತ್ತಿದೆ. ಇದರ ಬದಲು ಸೂಕ್ತ ಟೆಂಟ್ ಹಾಗೂ ಶೌಚಾಲಯದ ವದಯವಸ್ಥೆ ಮಾಡಲು ಆಸಕ್ತಿ ತೋರಬೇಕು. ಜಾತ್ರಾ ಗದ್ದುಗೆಯ ಹತ್ತಿರ ಸ್ಥಳಗಳಾದ ರಾಯಪ್ಪ ಹುಲೇಕಲ್ ಶಾಲೆ ಆವರಣ, ಝೂ ವೃತ್ತ, ಶ್ರೀಪಾದ ಹೆಗಡೆ ಕಡವೆ ಕಲ್ಯಾಣ ಮಂಟಪ, ಪೊಲೀಸ್ ಗ್ರೌಂಡ್, ಮಾರಿಗುಡಿ ಶಾಲಾ ಆವರಣ, ಕೋಟೆಕೆರೆ ಕೆಳಭಾಗದ ಪ್ರದೇಶ, ಡಾನ್ ಬಾಸ್ಕೋ, ಲಯನ್ಸ್ ಶಾಳೆ, ಭೂಮಾ ಶಾಲೆ ಆವರಣ ಸೇರಿದಂತೆ ವಿವಿಧ ಸ್ಥಳದಲ್ಲಿ ಈ ಟೆಂಟ್ ವ್ಯವಸ್ಥೆ ಮಾಡಿದರೆ ಭಕ್ತರಿಗೂ ಭದ್ರತೆ, ಸುರಕ್ಷಿತ ನಿದ್ದೆ ಮಾಡಲು ಅವಕಾಶ ಲಭಿಸುತ್ತದೆ.
ಇನ್ನು ಸಾರ್ವಜನಿಕ ಪ್ರಸಾದ ಭೋಜನ ವ್ಯವಸ್ಥೆಯನ್ನು ಸೂಕ್ತ ಸ್ಥಳದಲ್ಲಿ ಮಾಡಬೇಕು. ರಾಯಪ್ಪ ಹುಲೇಕಲ್ ಶಾಲೆ, ಸಂಘ ಧಾಮಮೈದಾನ, ನೆಮ್ಮದಿ ಕುಟೀರ, ರಾಘವೇಂದ್ರ ಮಠ ಸರ್ಕಲ್, ದೇವಿಕೆರೆ, ಅಂಬೇಡ್ಕರ್ ಭವನದಲ್ಲಿ ಪ್ರಸಾದ ವಿತರಣೆಗೆ ಕೇಂದ್ರಗಳನ್ನು ಆರಂಭಿಸಬೇಕು.
ಈ ಬಾರಿ ಮೊಬೈಲ್ ಟಾಯ್ಲೆಟ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲು ನಗರಸಭೆಗೆ ಸೂಚನೆ ನೀಡಬೇಕು. ಸಾರ್ವಜನಿಕರು ದೇವಿಯ ದರ್ಶನಕ್ಕೆ ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಿರುವುದರಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಾತ್ರಾ ವೇಳೆ ಕಸ ಉತ್ಪಾದನೆ ಅಧಿಕ ಪ್ರಮಾಣದಲ್ಲಾಗುವ ಕಾರಣ ತ್ಯಾಜ್ಯ ಜಾಸ್ತಿ ಉತ್ಪಾದನೆ ಆಗುವ ಅಂಗಡಿಗಳಿಗೆ, ಮಾಲಿನ್ಯ ಉಂಟುಮಾಡುವ ಅಂಗಡಿಗಳಿಗೆ ಅವಕಾಶ ಕಡಿಮೆ ಮಾಡಬೇಕು. ರಥೋತ್ಸವ ಇಕ್ಕಟ್ಟಾದ ಜಾಗದಲ್ಲಿ ನಡೆಯುವ ಕಾರಣ ಇಲ್ಲಿಯ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ಸಾಧ್ಯವಾದಷ್ಟು ಭೂಗತ ಕೇಬಲ್ ಅಳವಡಿಕೆಗೆ ಕ್ರಮ ವಹಿಸಲಿ. ಜಾತ್ರಾ ಗದ್ದುಗೆಯ ಸುತ್ತ ಜನ ದಟ್ಟಣಿ ಜಾಸ್ತಿ ಇರುವ ಕಾರಣ ವಿಕಲ ಚೇತನರಿಗೆ, ಗರ್ಭಿಣಿಯರಿಗೆ, ಶಿಶುವಿನೊಂದಿಗೆ ಆಗಮಿಸುವ ತಾಯಂದಿರಿಗೆ ವಿಶೇಷ ಪ್ರವೇಶ ದ್ವಾರ ನಿರ್ಮಿಸಲಿ. ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಕನಿಷ್ಠ ೫ ಕಡೆ ತುರ್ತು ಚಿಕಿತ್ಸಾ ಘಟಕ ಆರಂಭಿಸಲು ಆರೋಗ್ಯ ಇಲಾಖೆಗೆ ಸೂಚಿಸಲಿ, ಇದು ಯಾವುದನ್ನೂ ಮಾಡಿಲ್ಲವೆಂದರೆ ಫೆಬ್ರವರಿ ೩ ರಿಂದ ತಾಯಿ ಮಾರಿಕಾಂಬೆಯ ಭಕ್ತರ ಸಲುವಾಗಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.