ಅಂಕೋಲಾ: ಹಾಡಹಗಲೇ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಮೇಲೆ ಮಾರಣಾಂತಿಕ ಹಲ್ಲೆ
ಆಪ್ತ ನ್ಯೂಸ್ ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿ ಎಂಬಲ್ಲಿ ಇಂದು ಬೆಳಿಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೆಪಿಸಿಸಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯ್ಕ (45) ಅವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.
ಘಟನೆಯ ವಿವರ:
ಇಂದು ಬೆಳಿಗ್ಗೆ ಹೇರ್ ಕಟಿಂಗ್ ಸೆಲೂನ್ ನಿಂದ ಗೋಪಾಲಕೃಷ್ಣ ನಾಯಕ ಅವರು ತಮ್ಮ ಕಾರಿನ ಕಡೆಗೆ ಹೋಗುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಅವರು ಹೊರಗೆ ಬರುವುದನ್ನೇ ಕಾಯುತ್ತಿದ್ದ ದುಷ್ಕರ್ಮಿಗಳ ತಂಡವೊಂದು ಅವರನ್ನು ನೆಲಕ್ಕೆ ಕಡವಿ ತಲೆ ಮತ್ತು ಕೈ ಬುಜಕ್ಕೆ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ. ಗೋಪಾಲಕೃಷ್ಣ ಅವರು ಎದ್ದು ಓಡಿ ಹೋಗಿ ಹಣಕಾಸಿನ ಸಂಸ್ಥೆಯೊಂದರ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡ ಕಾರಣ ಅನಾಹುತ ತಪ್ಪಿದೆ ಎನ್ನಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಳಿಕೋರರು ಗೋವಾ ನೋಂದಣಿ ಕಾರಿನಲ್ಲಿ ಬಂದು ಹಠಾತ್ ಹಲ್ಲೆ ನಡೆಸಿ, ನಂತರ ವೇಗವಾಗಿ ಪರಾರಿಯಾಗಿದ್ದಾರೆ.
ಮೊದಲು ಕಬ್ಬಿಣದ ರಾಡ್ನಿಂದ ಹೊಡೆದ ಕಿಡಿಗೇಡಿಗಳು, ನಂತರ ಚಾಕುವಿನಿಂದ ಅವರ ತಲೆ, ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಮನಬಂದಂತೆ ಇರಿದಿದ್ದಾರೆ. ಅಂಕೋಲಾದ ಜನನಿಬಿಡ ಪ್ರದೇಶದಲ್ಲೇ ಈ ಕೃತ್ಯ ನಡೆದಿದ್ದು, ದಾಳಿ ನಡೆಸಿದ ಕೂಡಲೇ ಆರೋಪಿಗಳು ಅದೇ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಆಸ್ಪತ್ರೆಗೆ ದಾಖಲು:
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗೋಪಾಲಕೃಷ್ಣ ನಾಯ್ಕ ಅವರನ್ನು ಸ್ಥಳೀಯರು ಕೂಡಲೇ ಅಂಕೋಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಅವರು ಅಂಕೋಲಾ ಶಾಸಕ ಸತೀಶ್ ಸೈಲ್ ಅವರ ಆಪ್ತರೆಂದು ಗುರುತಿಸಿಕೊಂಡಿದ್ದಾರೆ.
ಪೊಲೀಸ್ ತನಿಖೆ:
ವಿಷಯ ತಿಳಿಯುತ್ತಿದ್ದಂತೆಯೇ ಅಂಕೋಲಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದ್ದು, ಗೋವಾ ನೋಂದಣಿಯ ಕಾರಿನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ದಾಳಿಗೆ ಕಾರಣವೇನು?
ಈ ಹಲ್ಲೆಯ ಹಿಂದೆ ಹಳೆಯ ವೈಯಕ್ತಿಕ ದ್ವೇಷವಿದೆಯೇ ಅಥವಾ ರಾಜಕೀಯ ಕಾರಣಗಳಿವೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆಯಿಂದಾಗಿ ಅಂಕೋಲಾ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
What's Your Reaction?
Like
0
Dislike
1
Love
1
Funny
0
Angry
0
Sad
0
Wow
0