ಕಂಪೌಂಡ್ ಗೋಡೆ ಕುಸಿದು ಮನೆಗೆ ಭಾರೀ ಹಾನಿ: ಸಂತ್ರಸ್ತ ಕುಟುಂಬಕ್ಕೆ ಬಿಜೆಪಿ ತಂಡ ಭೇಟಿ, ವೈಯಕ್ತಿಕ ಆರ್ಥಿಕ ನೆರವು
ಆಪ್ತ ನ್ಯೂಸ್ ಶಿರಸಿ:
ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಶಿರಸಿ ನಗರದ ಗಾಂಧಿನಗರ ಪ್ರದೇಶದಲ್ಲಿ ಪಕ್ಕದ ಮನೆಯ ಕಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಮನೆಗೆ ಅಪಾರ ಹಾನಿ ಸಂಭವಿಸಿರುವ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ಶಿರಸಿ ನಗರ ಬಿಜೆಪಿ ಅಧ್ಯಕ್ಷ ಆನಂದ್ ಸಾಲೇರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬುವ ಜೊತೆಗೆ ವೈಯಕ್ತಿಕ ಆರ್ಥಿಕ ನೆರವು ನೀಡಿದೆ.
ಗಾಂಧಿನಗರ ನಿವಾಸಿ ಬಿ.ಟಿ. ನಾಯ್ಕ ಬಾಶಿಯವರ ಪುತ್ರ ರಾಮಚಂದ್ರ ನಾಯ್ಕ ಅವರ ಮನೆಯ ಮೇಲೆ ಪಕ್ಕದ ಮನೆಯ ಕಂಪೌಂಡ್ ಗೋಡೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಮನೆಯ ಹಂಚು, ಗೋಡೆ ಹಾಗೂ ನೀರಿನ ಟ್ಯಾಂಕ್ ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಘಟನೆಯಿಂದ ಕುಟುಂಬ ಆತಂಕಕ್ಕೆ ಒಳಗಾಗಿದ್ದು, ಮತ್ತೆ ಮಳೆ ಮುಂದುವರಿದರೆ ಇನ್ನಷ್ಟು ಗೋಡೆ ಕುಸಿಯುವ ಸಾಧ್ಯತೆ ಇರುವುದರಿಂದ ನಿವಾಸಿಗಳು ಭಯಭೀತರಾಗಿದ್ದಾರೆ.
ತಕ್ಷಣ ಪರಿಹಾರ ನೀಡುವಂತೆ ಆಗ್ರಹ
ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ, "ಸಂತ್ರಸ್ತ ರಾಮಚಂದ್ರ ನಾಯ್ಕ ಅವರು ಜೊಮ್ಯಾಟೋದಲ್ಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಈಗಾಗಲೇ ಕಂಪೌಂಡ್ ಗೋಡೆ ಕುಸಿತದಿಂದ ಮನೆಗೆ ಗಂಭೀರ ಹಾನಿಯಾಗಿದೆ. ಮಳೆ ಮುಂದುವರಿದರೆ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಬೇಕು," ಎಂದು ಒತ್ತಾಯಿಸಿದರು.
'ಜೀವನವೇ ಸಂಕಷ್ಟಕ್ಕೆ ಸಿಲುಕಿದೆ' – ಸಂತ್ರಸ್ತನ ಅಳಲು
ಘಟನೆಯಲ್ಲಿ ಮನೆಗೆ ಹಾನಿಯಾದ ಬಗ್ಗೆ ಮಾತನಾಡಿದ ರಾಮಚಂದ್ರ ನಾಯ್ಕ, "ರಾತ್ರಿಯ ವೇಳೆ ಪಕ್ಕದ ಮನೆಯ ಕಂಪೌಂಡ್ ಗೋಡೆ ಕುಸಿದು ಮನೆಯ ಮೇಲೆ ಬಿದ್ದಿದೆ. ಮನೆಯ ಹಂಚು, ಗೋಡೆ ಹಾಗೂ ನೀರಿನ ಟ್ಯಾಂಕ್ ಸಂಪೂರ್ಣ ಹಾನಿಯಾಗಿದೆ. ನಾನು ಜೊಮ್ಯಾಟೋದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಈಗ ಮನೆಗೂ ಹಾನಿಯಾಗಿರುವುದರಿಂದ ಕುಟುಂಬದ ಸ್ಥಿತಿ ತುಂಬಾ ಸಂಕಷ್ಟಕರವಾಗಿದೆ. ಬದುಕಿಗೆ ಆಸರೆಯೇ ಇಲ್ಲದಂತಾಗಿದೆ," ಎಂದು ತಮ್ಮ ನೋವನ್ನು ಹಂಚಿಕೊಂಡರು.
ನಗರಸಭೆ ಇಂಜಿನಿಯರ್ಗೆ ಕರೆ ಮಾಡಿ ಮನವಿ
ಘಟನೆಯ ಗಂಭೀರತೆಯನ್ನು ಮನಗಂಡ ಶಿರಸಿ ನಗರ ಬಿಜೆಪಿ ಅಧ್ಯಕ್ಷ ಆನಂದ್ ಸಾಲೇರ್ ಅವರು ಸ್ಥಳದಲ್ಲಿಯೇ ನಗರಸಭೆ ಇಂಜಿನಿಯರ್ ಸುಫಿಯಾನ್ ಅವರಿಗೆ ದೂರವಾಣಿ ಕರೆ ಮಾಡಿ, ಮಳೆಯಿಂದಾಗಿ ಮಣ್ಣು ಪದೇ ಪದೇ ಕುಸಿಯುತ್ತಿರುವ ಪರಿಸ್ಥಿತಿ ಹಾಗೂ ಸಂಭವಿಸಿರುವ ಹಾನಿಯ ಬಗ್ಗೆ ವಿವರಿಸಿದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಾನಿಗೆ ತಕ್ಕ ಪರಿಹಾರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಇಂಜಿನಿಯರ್ ಸುಫಿಯಾನ್ ಅವರು ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ವೈಯಕ್ತಿಕ ಆರ್ಥಿಕ ನೆರವು ನೀಡಿ ಧೈರ್ಯ ತುಂಬಿದ ಬಿಜೆಪಿ ನಾಯಕರು
ಪರಿಶೀಲನೆ ಬಳಿಕ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಸಂತ್ರಸ್ತ ರಾಮಚಂದ್ರ ನಾಯ್ಕ ಅವರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ, "ಈ ಸಂಕಷ್ಟದ ಸಮಯದಲ್ಲಿ ನಾವು ನಿಮ್ಮೊಂದಿಗಿದ್ದೇವೆ. ಯಾವುದೇ ರೀತಿಯ ಸಹಾಯದ ಅಗತ್ಯವಿದ್ದರೂ ಬಿಜೆಪಿ ಸದಾ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ," ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ನಗರಸಭೆಯ ಮಾಜಿ ಉಪಾಧ್ಯಕ್ಷ ರಮಾಕಾಂತ್ ಭಟ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಘಟನೆಯಿಂದ ಗಾಂಧಿನಗರ ಪ್ರದೇಶದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದ್ದು, ನಿರಂತರ ಮಳೆಯ ಹಿನ್ನೆಲೆಯಲ್ಲಿ ಅಪಾಯದ ಅಂಚಿನಲ್ಲಿರುವ ಮನೆಗಳು ಹಾಗೂ ಕಂಪೌಂಡ್ ಗೋಡೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ತಕ್ಷಣ ಪರಿಶೀಲನೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
1
Sad
0
Wow
0



