ಶಾಲೆಯ ಪಕ್ಕವೇ ಭೂಕುಸಿತ; ಕಟ್ಟಡಕ್ಕೆ ಅಪ್ಪಳಿಸಿದ ಬೃಹತ್ ಬಂಡೆ – ಸಮಯೋಚಿತ ಕ್ರಮದಿಂದ ತಪ್ಪಿದ ಭಾರೀ ಅನಾಹುತ

Jul 17, 2026 - 21:40
 0  108
ಶಾಲೆಯ ಪಕ್ಕವೇ ಭೂಕುಸಿತ; ಕಟ್ಟಡಕ್ಕೆ ಅಪ್ಪಳಿಸಿದ ಬೃಹತ್ ಬಂಡೆ – ಸಮಯೋಚಿತ ಕ್ರಮದಿಂದ ತಪ್ಪಿದ ಭಾರೀ ಅನಾಹುತ

ಆಪ್ತ ನ್ಯೂಸ್ ಕುಮಟಾ:

ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ನೆಲ್ಲಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪಕ್ಕದಲ್ಲಿ ಶುಕ್ರವಾರ ಭೂಕುಸಿತ ಸಂಭವಿಸಿ, ಬೃಹತ್ ಬಂಡೆಯೊಂದು ಉರುಳಿ ಶಾಲಾ ಕಟ್ಟಡಕ್ಕೆ ಅಪ್ಪಳಿಸಿದ ಘಟನೆ ನಡೆದಿದೆ. ಶಾಲಾ ಆಡಳಿತ ಮಂಡಳಿಯ ಸಮಯೋಚಿತ ಮುನ್ನೆಚ್ಚರಿಕೆ ಕ್ರಮದಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಗುಡ್ಡದ ಒಂದು ಭಾಗ ಕುಸಿದು, ಅಲ್ಲಿದ್ದ ಬೃಹತ್ ಬಂಡೆಯೊಂದು ಶಾಲೆಯ ಕಟ್ಟಡದ ಮೇಲೆ ಬಿದ್ದಿದೆ. ಘಟನೆಯಿಂದ ಕಟ್ಟಡದ ಒಂದು ಭಾಗಕ್ಕೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.

ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದನ್ನು ಮುಂಚಿತವಾಗಿಯೇ ಅಂದಾಜಿಸಿದ್ದ ಶಾಲಾ ಆಡಳಿತ ಮಂಡಳಿ, ಅಪಾಯದ ವಲಯದಲ್ಲಿದ್ದ ತರಗತಿ ಕೊಠಡಿಗಳಿಂದ ವಿದ್ಯಾರ್ಥಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿತ್ತು. ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ ಕೆಲವೇ ಕ್ಷಣಗಳಲ್ಲಿ ಬಂಡೆ ಉರುಳಿ ಕಟ್ಟಡಕ್ಕೆ ಅಪ್ಪಳಿಸಿರುವುದು ಆತಂಕ ಮೂಡಿಸಿದರೂ, ಶಾಲೆಯ ಮುನ್ನೆಚ್ಚರಿಕಾ ಕ್ರಮದಿಂದ ನೂರಾರು ಮಕ್ಕಳ ಜೀವ ಅಪಾಯದಿಂದ ಪಾರಾಗಿದೆ.

ಗಮನಾರ್ಹ ಸಂಗತಿಯೆಂದರೆ, ಇದೇ ಪ್ರದೇಶದಲ್ಲಿ ಕಳೆದ ವರ್ಷವೂ ಭೂಕುಸಿತ ಸಂಭವಿಸಿತ್ತು. ಈ ಹಿನ್ನೆಲೆ ನಿರಂತರ ಮಳೆಯನ್ನು ಗಮನದಲ್ಲಿಟ್ಟುಕೊಂಡು ಶಾಲಾ ಆಡಳಿತ ಹೆಚ್ಚುವರಿ ಎಚ್ಚರಿಕೆ ವಹಿಸಿತ್ತು.

ಎಲ್‌ಕೆಜಿ (LKG)ಯಿಂದ ಪಿಯುಸಿ (PUC)ವರೆಗೆ ಶಿಕ್ಷಣ ನೀಡುತ್ತಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಘಟನೆ ನಡೆದ ತಕ್ಷಣ ಸಂಬಂಧಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿ, ಮುಂದಿನ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ಪಡೆದಿದ್ದಾರೆ.

ಸ್ಥಳೀಯರು ಶಾಲೆಯ ಸುತ್ತಮುತ್ತಲಿನ ಗುಡ್ಡ ಪ್ರದೇಶದ ಭೂಸ್ಥಿರತೆ ಕುರಿತು ತಕ್ಷಣ ತಜ್ಞರಿಂದ ಪರಿಶೀಲನೆ ನಡೆಸಿ, ಅಗತ್ಯ ರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮಳೆಗಾಲ ಮುಂದುವರಿದಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0