ಸಾಹಿತ್ಯ‌ ಸಮ್ಮೇಳನಕ್ಕೆ ಭರದಿಂದ ಸಾಗುತ್ತಿರುವ ಪೆಂಡಲ್ ಹಾಗೂ ವೇದಿಕೆ ನಿರ್ಮಾಣ‌ ಕಾರ್ಯ

Dec 11, 2025 - 08:27
 0  38
ಸಾಹಿತ್ಯ‌ ಸಮ್ಮೇಳನಕ್ಕೆ ಭರದಿಂದ ಸಾಗುತ್ತಿರುವ ಪೆಂಡಲ್ ಹಾಗೂ ವೇದಿಕೆ ನಿರ್ಮಾಣ‌ ಕಾರ್ಯ
ಆಪ್ತ ನ್ಯೂಸ್‌ ದಾಂಡೇಲಿ:
ಡಿ.13 ರಿಂದ ಡಿ.15 ರ ವರೆಗೆ ದಾಂಡೇಲಿ ನಗರದಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಪೆಂಡಾಲ್ ಹಾಗೂ ವೇದಿಕೆ ನಿರ್ಮಾಣಕ್ಕಾಗಿ ಭರದಿಂದ ಸಾಗುತ್ತಿದೆ.
 
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆಯವರ ನೇತೃತ್ವದಲ್ಲಿ ತಾಲೂಕಾಡಳಿತ ಮತ್ತು ನಗರಾಡಳಿತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಕಸಾಲ ಘಟಕಗಳ ಪದಾಧಿಕಾರಿಗಳು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಹಾಗೂ ಕನ್ನಡಾಭಿಮಾನಿಗಳ ಸಹಕಾರದಲ್ಲಿ ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಹಾಗೂ ಅವಿಸ್ಮರಣೀಯವಾಗಿ ನಡೆಸಲು ಸಿದ್ಧತೆಗಳು ಭರದಿಂದ ನಡೆಯುತ್ತಿದೆ.
 
ಜಿಲ್ಲೆಯ ಹಿರಿಯ ಸಾಹಿತಿ ರೋಹಿದಾಸ ನಾಯ್ಕ ಅವರ ಸರ್ವಾಧ್ಯಕ್ಷತೆಯಡಿ ವಿಶೇಷವಾಗಿ ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು 25ನೇ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವಾಗಿದ್ದು, ಆ ಕಾರಣಕ್ಕಾಗಿ ಈ ಬಾರಿಯ ಸಮ್ಮೇಳನವನ್ನು ಮೂರು ದಿನಗಳವರೆಗೆ ಆಯೋಜಿಸಲಾಗಿದೆ. ಈಗಾಗಲೇ ಹಳೆ ನಗರಸಭೆಯ ಮೈದಾನದಲ್ಲಿ ವೇದಿಕೆಗೆ ಸಂಬಂಧಿಸಿದ ಕಾರ್ಯಗಳು ಹಾಗೂ ಇನ್ನಿತರ ಕಾರ್ಯಗಳು ಮತ್ತು ಪೆಂಡಾಲ್ ನಿರ್ಮಾಣ ಕಾರ್ಯಗಳು ಭರದಿಂದ ನಡೆಯುತ್ತಿದೆ.
 
ಇದರ ಹೊರತಾಗಿಯೂ ನಗರದ ಜೆ‌.ಎನ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಭವನ್ನು ಕೋರಿ ಕನ್ನಡಾಭಿಮಾನಿಗಳಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ವಾಗತವನ್ನು ಕೋರಿದ ಬ್ಯಾನರ್ ಗಳು ರಾರಾಜಿಸುತ್ತಿದೆ. ಪಕ್ಷ, ಜಾತಿ-ಮತ ಧರ್ಮವನ್ನು ಮೀರಿ ಬ್ಯಾನರ್ ಗಳು ಕನ್ನಡವೇ ಸರ್ವಸ್ವ ಎನ್ನುವುದನ್ನು ಸಾರಿ ಹೇಳಲು ಹೊರಟಂತಿದೆ. ಈಗಾಗಲೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದ್ದು ನಗರದಲ್ಲೆಡೆ ಕನ್ನಡದ ಡಿಂಡಿಮ ಬಾರಿಸತೊಡಗಿದೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0