ಥಲಸೇಮಿಯಾ ವಿರುದ್ಧ ಪುಟ್ಟ ರಕ್ಷಿತ್ ಹೋರಾಟ: ಬೋನ್ ಮ್ಯಾರೋ ಚಿಕಿತ್ಸೆಗೆ ₹45 ಲಕ್ಷ ಅಗತ್ಯ; ನೆರವಿನ ಹಸ್ತ ಚಾಚುವಂತೆ ಮನವಿ
ಆಪ್ತ ನ್ಯೂಸ್ ಶಿರಸಿ:
ಬದುಕಿನ ಬಣ್ಣಗಳನ್ನು ಚಿತ್ರಗಳಲ್ಲಿ ಅರಳಿಸಬೇಕಿದ್ದ ಪುಟ್ಟ ಬಾಲಕನ ಬದುಕಿನ ಬಣ್ಣಗಳೇ ಇಂದು ಮಸುಕಾಗಿವೆ. ಥಲಸೇಮಿಯಾ (Thalassemia) ಎಂಬ ಅಪರೂಪದ ರಕ್ತ ಸಂಬಂಧಿ ಜೆನೆಟಿಕ್ ಕಾಯಿಲೆಯಿಂದ ಬಳಲುತ್ತಿರುವ ರಕ್ಷಿತ್ ಇದೀಗ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾನೆ. ಆತನ ಚಿಕಿತ್ಸೆಗೆ ಸುಮಾರು ₹45 ಲಕ್ಷ ವೆಚ್ಚವಾಗಲಿದ್ದು, ಕುಟುಂಬವು ಸಾರ್ವಜನಿಕರ ನೆರವಿನ ನಿರೀಕ್ಷೆಯಲ್ಲಿದೆ.
ರಕ್ಷಿತ್ ಅವರ ತಂದೆ ಶ್ರೀ ಕೃಷ್ಣ ಮರಾಠಿ ಅವರು ಶಾಲೆಯ ಚಿತ್ರಕಲಾ ಶಿಕ್ಷಕರಾಗಿದ್ದು, ತಮ್ಮ ಸರಳತೆ, ಸೌಜನ್ಯ ಹಾಗೂ ಸೇವಾ ಮನೋಭಾವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕುಟುಂಬವು ಯಾವುದೇ ಸಂಕಷ್ಟವನ್ನು ಹೊರಗೆ ತೋರಿಸಿಕೊಳ್ಳದೆ, ಆತ್ಮಸ್ಥೈರ್ಯದಿಂದ ಬದುಕು ಸಾಗಿಸುತ್ತಿದ್ದರೂ, ಇದೀಗ ವಿಧಿಯ ಸವಾಲು ಅವರನ್ನು ಸಂಕಷ್ಟದ ಅಂಚಿಗೆ ತಳ್ಳಿದೆ.
ರಕ್ಷಿತ್ ಶಾಂತ ಸ್ವಭಾವದ, ಸದಾ ನಗುಮುಖದ ಬಾಲಕ. ತಂದೆಯಂತೆ ಚಿತ್ರಕಲೆಯಲ್ಲೂ ಅಪಾರ ಆಸಕ್ತಿ ಮತ್ತು ಪ್ರತಿಭೆ ಹೊಂದಿರುವ ಈ ಪುಟ್ಟ ಬಾಲಕನ ಭವಿಷ್ಯವನ್ನು ಉಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಕಾಯಿಲೆ ಪತ್ತೆಯಾದ ದಿನದಿಂದಲೂ ಪ್ರತಿ ತಿಂಗಳು ರಕ್ತ ವರ್ಗಾವಣೆಯ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ವೈದ್ಯರ ಪ್ರಕಾರ, ಇದಕ್ಕೆ ಶಾಶ್ವತ ಪರಿಹಾರ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ (Bone Marrow Transplant) ಮಾತ್ರ. ಸಂತಸದ ಸಂಗತಿ ಎಂದರೆ, ಈ ಚಿಕಿತ್ಸೆಗೆ ಬೇಕಾದ ದಾನಿಯಾಗಿ ಮಗುವಿನ ಪೋಷಕರೇ ಹೊಂದಾಣಿಕೆಯಾಗಿದ್ದಾರೆ. ಆದರೆ ಚಿಕಿತ್ಸೆಗಾಗಿ ಅಗತ್ಯವಿರುವ ₹45 ಲಕ್ಷ ವೆಚ್ಚವನ್ನು ಭರಿಸುವುದು ಮಧ್ಯಮ ವರ್ಗದ ಈ ಕುಟುಂಬಕ್ಕೆ ಅಸಾಧ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಕುಟುಂಬವು ಸಮಾಜದ ದಾನಿಗಳ, ಸಂಘ-ಸಂಸ್ಥೆಗಳ ಹಾಗೂ ಸಾರ್ವಜನಿಕರ ನೆರವಿಗೆ ಮನವಿ ಮಾಡಿದೆ. ಪ್ರತಿಯೊಬ್ಬರ ಸಣ್ಣ ಸಹಾಯವೂ ರಕ್ಷಿತ್ನ ಬದುಕಿಗೆ ಹೊಸ ಆಶಾಕಿರಣವಾಗಬಹುದು ಎಂದು ಕುಟುಂಬದವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ಸಾಧ್ಯವಾದಷ್ಟು ಆರ್ಥಿಕ ನೆರವು ನೀಡುವುದರ ಜೊತೆಗೆ, ಈ ಮಾಹಿತಿಯನ್ನು ಹೆಚ್ಚಿನ ಜನರಿಗೆ ತಲುಪಿಸುವ ಮೂಲಕವೂ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.
"ನಾವು ಕೊಡುವ ಸಣ್ಣ ನೆರವು, ಒಂದು ಪುಟ್ಟ ಜೀವದ ಭವಿಷ್ಯವನ್ನು ಉಳಿಸಬಹುದು. ರಕ್ಷಿತ್ನ ಬದುಕಿನ ಚಿತ್ರಕ್ಕೆ ಮತ್ತೆ ಬಣ್ಣ ತುಂಬುವ ಹೊಣೆ ನಮ್ಮೆಲ್ಲರದ್ದು."
ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗಿನ ಅಕೌಂಟ್ ಬಳಕೆ ಮಾಡಬಹುದು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



