ಪೊಲೀಸರ ಮನೆಯಲ್ಲೇ ಕೈಚಳಕ ತೋರಿಸಿದ್ದ ಕೇರಳದ 'ಖತರ್ನಾಕ್' ಗ್ಯಾಂಗ್ ಅಂದರ್: ಗೋಕರ್ಣ ಪೊಲೀಸರ ಸಿನಿಮೀಯ ಕಾರ್ಯಾಚರಣೆ!
ಆಪ್ತ ನ್ಯೂಸ್ ಗೋಕರ್ಣ:
ರಕ್ಷಣೆ ನೀಡಬೇಕಾದ ಪೊಲೀಸ್ ಸಿಬ್ಬಂದಿಯ ಮನೆಯಲ್ಲೇ ಕಳ್ಳತನ ಮಾಡಿ ಸವಾಲು ಹಾಕಿದ್ದ ಅಂತಾರಾಜ್ಯ ಕಳ್ಳರ ತಂಡ ಈಗ ಪೊಲೀಸರ ಬಲೆಗೆ ಬಿದ್ದಿದೆ. ಗೋಕರ್ಣ ಪೊಲೀಸರು ಕೇರಳದ ಕುಖ್ಯಾತ ಇಬ್ಬರು ಖದೀಮರನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನೆಲೆ:
ಜನವರಿ 10, 2026 ರಂದು ಗೋಕರ್ಣ ಠಾಣಾ ವ್ಯಾಪ್ತಿಯ ಹಿರೇಗುತ್ತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಪೊಲೀಸ್ ಕಾನ್ಸ್ಟೇಬಲ್ ಚಂದ್ರಕಾಂತ್ ಮಸಾಕಲ್ ಅವರ ಮನೆಯ ಬೀಗ ಮುರಿದಿದ್ದ ಕಳ್ಳರು, ಸುಮಾರು 66 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಪೊಲೀಸರ ಮನೆಯಲ್ಲೇ ನಡೆದ ಈ ಕಳ್ಳತನ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಬಂಧಿತ ಆರೋಪಿಗಳು:
ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕೇರಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ ಗೋಕರ್ಣ ಪೊಲೀಸರು ಇಬ್ಬರು ಕುಖ್ಯಾತ ಹಳೇ ಅಪರಾಧಿಗಳನ್ನು ಹೆಡೆಮುರಿ ಕಟ್ಟಿದ್ದಾರೆ:
-
ಸತ್ತೇಶ್ ಕೆ. ಪಿ (40) - ನಿವಾಸಿ: ತ್ರಿಶೂರ್, ಕೇರಳ.
-
ಶಿಜು ಎಂ. ಆರ್ (47) - ನಿವಾಸಿ: ತ್ರಿಶೂರ್, ಕೇರಳ.
ಜಪ್ತು ಮಾಡಿದ ಸ್ವತ್ತುಗಳು:
-
66 ಗ್ರಾಂ ತೂಕದ ಚಿನ್ನಾಭರಣಗಳು.
-
ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರ್.
-
ವಶಪಡಿಸಿಕೊಂಡ ಒಟ್ಟು ಸ್ವತ್ತುಗಳ ಮೌಲ್ಯ ಅಂದಾಜು 18 ಲಕ್ಷ ರೂಪಾಯಿ.
ಮೂರು ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಕೇಸ್ಗಳು!
ಬಂಧಿತ ಆರೋಪಿಗಳು ಕೇವಲ ಈ ಒಂದು ಕೃತ್ಯಕ್ಕೆ ಸೀಮಿತರಾದವರಲ್ಲ. ಇವರು ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸುಮಾರು 40ಕ್ಕೂ ಹೆಚ್ಚು ದರೋಡೆ ಹಾಗೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಹಳೇ ಅಪರಾಧಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ತಂಡಕ್ಕೆ ಶ್ಲಾಘನೆ:
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಮ್.ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಮತ್ತು ಭಟ್ಕಳ ಡಿವೈಎಸ್ಪಿ ಗಿರೀಶ್ ಬಿ.ವೈ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಗೋಕರ್ಣ ಪಿಐ ಶ್ರೀಧರ ಎಸ್.ಆರ್, ಪಿಎಸ್ಐ ಅನಿಲ್ ಬಿ.ಎಮ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಜೇಶ್ ನಾಯ್ಕ, ಶ್ರೀಕಾಂತ್ ಕಟಬರ್, ಪರಮೇಶ್ವರ ಬೆಂಡ್ಲಗಟ್ಟಿ, ಕಿರಣ್ ಬಾಳೂರ್ ಮತ್ತು ತಾಂತ್ರಿಕ ವಿಭಾಗದ ಉದಯ ಗುನಗಾ ಹಾಗೂ ಬಬನ್ ಕದಂ ಅವರ ಸಾಹಸಿಕ ಕಾರ್ಯಕ್ಕೆ ಎಸ್ಪಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಸದ್ಯ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ರವಾನಿಸಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



