ಮಾಗೋಡು ಕಾಲನಿ ಸದ್ಬಳಕೆ: ಕೈಗಾರಿಕೆ ಸಚಿವ ಎಂ ಬಿ ಪಾಟೀಲಗೆ ಮನವಿ
ಆಪ್ತ ನ್ಯೂಸ್ ಬೆಳಗಾವಿ:
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಮಾಜಿ ಶಾಸಕ ವಿ. ಎಸ್ ಪಾಟೀಲ ಮತ್ತು ಬಿಜೆಪಿ ಮುಖಂಡರಾದ ಅನಂತ ಮೂರ್ತಿ ಹೆಗಡೆ ಶಿರಸಿ ನೇತೃತ್ವದ ನಿಯೋಗ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಮ್ ಬಿ ಪಾಟೀಲ್ ಅವರನ್ನು ಭೇಟಿಯಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಕಾಲನಿಯನ್ನು 'ವಿಶೇಷ ಕೈಗಾರಿಕಾ ಪ್ರದೇಶ ಅಥವಾ ವಿಶೇಷ ಆರ್ಥಿಕ ವಲಯ' ಎಂದು ಘೋಷಿಸುವಂತೆ ಕೋರಿ ಮನವಿ ಸಲ್ಲಿಸಿತು.
ಮನವಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ 300 ಎಕರೆಗೂ ಹೆಚ್ಚಿನ ಭೂಮಿಯು ಲಭ್ಯವಿದ್ದು, ಇದು ಮೂಲತಃ ಬೇಡ್ತಿ ಯೋಜನೆಗಾಗಿ ಕೆ.ಪಿ.ಸಿಗೆ ಕಾಲನಿ ನಿರ್ಮಾಣ ಮಾಡಲು ರೂಪಿಸಿದ್ದು ನಿರ್ಜನವಾಗಿದೆ, ಆಗ ನಿರ್ಮಿಸಿದ್ದ ಮನೆಗಳು ಸಂಪೂರ್ಣ ಹಾಳಾಗಿವೆ.ಆ ಜಾಗವನ್ನುಫಾರೆಸ್ಟ್ ಇಲಾಖೆಯಿಂದ ಮರಳಿ ಪಡೆದು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ( Karnataka Industrial Areas Development Board) ಮುಖಾಂತರ ಟೆಕ್ ಪಾರ್ಕ್ / ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಿಸಿದರೆ ಇಲ್ಲಿನ ಯುವಕರು ವಲಸೆ ಹೋಗುವುದನ್ನು ತಪ್ಪಿಸಬಹುದು.
ಈ ಮಾಗೋಡು ಕಾಲನಿಯು ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಕೇವಲ 75 ಕಿ.ಮಿ.ಅಂತರದಲ್ಲಿದೆ. ಹುಬ್ಬಳ್ಳಿ- ಅಂಕೋಲಾ ರೇಲ್ವೇ ಯೋಜನೆಯು ಇದರ ಸಮೀಪವೇ ನಡೆಯಲಿದೆ. ಅಂಕೋಲಾ - ಗುತ್ತಿ(ಆಂಧ್ರಪ್ರದೇಶ) ರಾಷ್ಟ್ರೀಯ ಹೆದ್ದಾರಿ 53 ಈ ಕಾಲನಿ ಸಮೀಪದಲ್ಲಿದೆ. ಖಾನಾಪುರ-ಹಳಿಯಾಳ-ಯಲ್ಲಾಪುರ-ಶಿರಸಿ - ಭಟ್ಕಳ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯು ಚಾಲ್ತಿಯಲ್ಲಿದೆ. ಇಂತಹ ಸಮಗ್ರ ಸಂಪರ್ಕ ಹೊಂದಿರುವ ಮಾಗೋಡಿನ ಹವಾಮಾನ ಅತ್ಯುತ್ತಮವಾಗಿದೆ. ಇದು ಊಟಿ-ಕೊಡೈಕೆನಾಲ್-ಡೆಹ್ರಾಡೂನ್ ಗಳಂತಹ ಸುಂದರ ಪ್ರದೇಶವಾಗಿದೆ. ಸಮೃದ್ಧ ನೀರಿದೆ. ಸಾಂಸ್ಕೃತಿಕವಾಗಿ ಸಂಪನ್ನವಾದ ಊರುಗಳು ಆಸುಪಾಸಿನಲ್ಲಿವೆ. ಆದ್ದರಿಂದ ಈ ಮಾಗೋಡು ಪ್ರದೇಶವನ್ನು ವಿಶೇಷ ಆರ್ಥಿಕ ವಲಯ ಅಥವಾ ವಿಶೇಷ ಔದ್ಯೋಗಿಕ ವಲಯ ಎಂದು ಘೋಷಿಸುವ ಮೂಲಕ ಆ ಭಾಗದ ಪ್ರತಿಭಾವಂತ ಯುವ ಜನಾಂಗದ ಐಟಿ,ಬಿಟಿ, ಸಾಫ್ಟ್ ವೇರ್ ತಂತ್ರಜ್ಞಾನಿಗಳಾಗುವ ಕನಸನ್ನು ನನಸು ಮಾಡಬೇಕು.
ಉತ್ತರ ಕನ್ನಡವು ಬೃಹತ್ ಯೋಜನೆಗಳಿಗೆ ಭಾರೀ ತ್ಯಾಗ ಮಾಡಿದ್ದಲ್ಲದೇ ಅಡಿಕೆ, ಮತ್ಸ್ಯೋದ್ಯಮದಿಂದ ಸಾವಿರಾರು ಕೋಟಿ ರೂ. ತೆರಿಗೆಯನ್ನು ನೀಡುತ್ತಿದೆ. ಯಾಲಕ್ಕಿ ಕಾಳುಮೆಣಸು, ಶುಂಠಿ ಮೊದಲಾದ ಸಾಂಬಾರ ಜೀನಸುಗಳಿಂದ ನೇರ ಹಾಗೂ ಪರೋಕ್ಷ ತೆರಿಗೆಯ ಮೂಲಕ 500 ಕೋಟಿಗೂ ಮಿಕ್ಕ ರೂ.ಗಳಷ್ಟು ಆದಾಯವನ್ನು ಗಳಿಸಿಕೊಡುತ್ತಿದೆ.
ದುಃಖದಾಯಕ ಸಂಗತಿಯೆಂದರೆ ಅಪಾರ ತ್ಯಾಗಕ್ಕೆ ಪ್ರತಿಯಾಗಿ ಅದರ ಕಾಲಾಂಶವೂ ಉಭಯ ಸರ್ಕಾರಗಳಿಂದ ಉತ್ತರ ಕನ್ನಡಕ್ಕೆ ಅತ್ಯುತ್ತಮ ಮಲ್ಟಿ ಸ್ಪೆಶಲ್ ಆಸ್ಪತ್ರೆ,ವಿಶ್ವವಿದ್ಯಾನಿಲಯ,ಸಂಶೋಧನಾಲಯ ಮುಂತಾದ ಪರಿಸರ ಪೂರಕ ಕೈಗಾರಿಕೆಗಳ ರೂಪದಲ್ಲಿ ಪ್ರಾಪ್ತವಾಗಿಲ್ಲ.
ಆದ್ದರಿಂದ ನಮ್ಮ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಇದೇ ಬೆಳಗಾವಿಯ ಅಧಿವೇಶನದಲ್ಲಿ ಮಾಗೋಡನ್ನು ವಿಶೇಷ ಆರ್ಥಿಕ ವಲಯ, ಅಥವಾ ವಿಶೇಷ ಕೈಗಾರಿಕಾ ಪ್ರದೇಶ ಎಂದು ಘೋಷಿಸುವ ನಿರ್ಣಯ ಕೈಗೊಳ್ಳುವ ಮೂಲಕ ಜಿಲ್ಲೆಯ ಜನರ ತ್ಯಾಗಕ್ಕೆ ಗೌರವ ನೀಡಬೇಕು. ರಾಜ್ಯದಲ್ಲಿ ಸದ್ಯೋ ಭವಿಷ್ಯದಲ್ಲಿ ನಡೆಯುವ ಅಂತರರಾಷ್ಟ್ರೀಯ ಟೆಕ್ ಸಮ್ಮಿಟ್ ನಲ್ಲಿ ಮಲ್ಟಿ ನ್ಯಾಶನಲ್ ಕಂಪನಿಗಳಿಗೆ ಸಾಫ್ಟ್ ವೇರ್ ಪಾರ್ಕ್ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಈ ಭಾಗದ ಯುವ ಜನಾಂಗದ ಕನಸು ನನಸಾಗಲು ಕಾರಣವಾಗಬೇಕು ಎಂಬುದಾಗಿ ಉಲ್ಲೇಖಿಸಲಾಗಿದೆ.
ಈ ವೇಳೆ ಗಣೇಶ್ ಹೆಗಡೆ, ರಮೇಶ ನಾಯ್ಕ್ ಕುಪ್ಪಳ್ಳಿ, ಶ್ರೀಪತಿ ಮುದ್ದೆಪಾಲ್, ರಾಘವೇಂದ್ರ ನಾಯ್ಕ್, ಅಂಕಿತ್ ಹೆಗಡೆ, ರಾಮಕೃಷ್ಣ ಗಾಂವ್ಕರ್, ನಾರಾಯಣ ಖಂಡೇಕರ್ , ಕೆ. ಟಿ ಹೆಗಡೆ ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



